ಪರಮೇಶಿಗೆ ಕಾಲೆಳೆದ ಸಿದ್ರಾಮಣ್ಣ ಖುಷ್ ಹುವಾ

ಸಿಡಿಮಿಡಿಗೊಂಡಿದ್ದ ಸಿದ್ದರಾಮಯ್ಯ, ರಾಜ್ಯದಲ್ಲಿ ಬರ ಉಂಟಾಗಿರುವ ಮಧ್ಯೆ ಇಂಥ ಕಾರ್ಯಕ್ರಮ ನಡೆಸುವುದು ಬೇಡ ಎಂದೂ ಪಕ್ಷಕ್ಕೆ ಸಲಹೆ ನೀಡಿದ್ದರು. ಆದರೆ ಈ ಹಿಂದೆ ನಡೆಸಿದ 'ಕಾಂಗ್ರೆಸ್ ನಡಿಗೆ ಜನರ ಬಳಿಗೆ' ಕಾರ್ಯಕ್ರಮ ಪಕ್ಷವನ್ನು ಜೀವಂತವಾಗಿಟ್ಟಿತ್ತು. ಇದೇ ರೀತಿ ಈಗಲೂ ಪಕ್ಷ ಸಂಘಟನೆಗೆ ಇಂಥ ಕಾರ್ಯಕ್ರಮ ನಡೆಸಬೇಕಾಗಿದೆ ಎಂದು ಪರಮೇಶ್ವರ್ ಹಠಕ್ಕೆ ಬಿದ್ದಿದ್ದರೆನ್ನಲಾಗಿದೆ.
ಎ.8ರ ಭಾನುವಾರ 'ಕಾಂಗ್ರೆಸ್ಗೆ ಬನ್ನಿ, ಬದಲಾವಣೆ ತನ್ನಿ' ಕಾರ್ಯಕ್ರಮಕ್ಕೆ ಯಶವಂತಪುರದಲ್ಲಿ ಚಾಲನೆ ನೀಡಲು ನಿರ್ಧರಿಸಲಾಗಿತ್ತು. ಆದರೆ ರಾಜ್ಯದಲ್ಲಿ ಬರಬಿದ್ದಿರುವಾಗ ಇಂತಹ ಕಾರ್ಯಕ್ರಮ ಸಮಂಜಸವಲ್ಲ ಎಂದು ಸಿಡಿದೆದ್ದ ಸಿದ್ದು, ಭಾನುವಾರ ಕಾರ್ಯಕ್ರಮಕ್ಕೆ ಚಕ್ಕರ್ ಹೊಡೆದು ಸೀದಾ ದೂರದ ಬರ ಪ್ರದೇಶಗಳಿಗೆ ತೆರಳುವ ಮುನ್ಸೂಚನೆ ನೀಡಿದ್ದರು. ತಕ್ಷಣ ಎಚ್ಚೆತ್ತುಕೊಂಡ ಹೈಕಮಾಂಡ್ ಇಬ್ಬರೂ ನಾಯಕರನ್ನು ಶುಕ್ರವಾರ ದಿಲ್ಲಿಗೆ ಕರೆಸಿಕೊಂಡಿತ್ತು.
ಸಿದ್ರಾಮಣ್ಣ ಖುಷ್ ಹುವಾ: ಶುಕ್ರವಾರ ಬೆಳಗ್ಗೆ ದಿಲ್ಲಿಗೆ ತೆರಳಿದ್ದ ನಾಯಕರು, ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ರಾಜ್ಯ ಉಸ್ತುವಾರಿ ಮಧುಸೂಧನ್ ಮಿಸ್ತ್ರಿ, ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಮತ್ತಿತರರೊಂದಿಗೆ ಮಾತುಕತೆ ನಡೆಸಿದರು.
ಮಾತುಕತೆಯ ವೇಳೆ ಸೋನಿಯಾ ಗಾಂಧಿ, ವೈಮನಸ್ಸು, ಭಿನ್ನಮತ ಬಿಟ್ಟು ಮೊದಲು ನೀವು ಬರಪೀಡಿತ ಪ್ರದೇಶಗಳಿಗೆ ತೆರಳಿ, ಅಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸಿ. ಕರ್ನಾಟಕದಲ್ಲಿ ಬರದಿಂದ ಜನ ತತ್ತರಗೊಂಡಿದ್ದು, ಆ ಬಗ್ಗೆ ಗಮನ ಹರಿಸುವ ಬದಲು ಪಕ್ಷದ ಕಾರ್ಯಕ್ರಮ ರೂಪಿಸುವುದು ಸೂಕ್ತವಲ್ಲ. ಅದೇನೇ ಇದ್ದರೂ ಜನ ನೆಮ್ಮದಿಯಿಂದ ಇರುವ ಹಾಗೆ ಮಾಡಿ ಎಂದು ಸಿದ್ದರಾಮಯ್ಯ ಹಾಗೂ ಪರಮೇಶ್ವರ್ಗೆ ತಾಕೀತು ಮಾಡಿದರು ಎನ್ನಲಾಗಿದೆ.
ಸೋನಿಯಾ ಗಾಂಧಿಯ ಕಟ್ಟಪ್ಪಣೆ ಸಿದ್ದರಾಮಯ್ಯರಿಗೆ ಖುಷಿ ತಂದರೆ, ಪರಮೇಶ್ವರ್ಗೆ ಬೇಸರವನ್ನುಂಟು ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ ತಮ್ಮ ಕಾರ್ಯಕ್ರಮ 'ಕಾಂಗ್ರೆಸ್ಗೆ ಬನ್ನಿ, ಬದಲಾವಣೆ ತನ್ನಿ"ಗೆ ಎ. 8ರಂದು ಸಾಂಕೇತಿಕ ಚಾಲನೆ ನೀಡಿ, ಬರಪೀಡಿತ ಪ್ರದೇಶಗಳತ್ತ ಹೋಗಲು ಪರಮೇಶ್ವರ್ ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ.












Click it and Unblock the Notifications