ಕೋಣನಕುಂಟೆಯಲ್ಲಿ ರೆಡ್ಡಿ ಗಣಿ ಇಂಜಿನಿಯರ್ ಜೋಪಾನ
ಸೆಪ್ಟೆಂಬರ್ 5ರಂದು ಸಿಬಿಐ ಬಂಧನಕ್ಕೊಳಗಾಗಿ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಣಿವಾರಿಸಿಕೊಳ್ಳುತ್ತಿರುವುದು ಇಡೀ ಜಗತ್ತಿಗೆ ತಿಳಿದ ವಿಷಯ. ಆದರೆ ರೆಡ್ಡಿ ಬಳಿ ಈ ಹಿಂದೆ ನೌಕರಿಯಲ್ಲಿದ್ದ ವಿ. ಆಂಜನೇಯ ಎಂಬ ಗಣಿ ಇಂಜಿನಿಯರ್ ಅಕ್ಷರಶಃ ಆಂತಕದಿಂದ ದಿನದೂಡುತ್ತಿದ್ದಾರೆ.
ಪ್ರಕರಣದಲ್ಲಿ ಸಲ್ಲಿಸಲಾಗಿರುವ ಚಾರ್ಜ್ ಶೀಟಿನಲ್ಲಿ 201 ಮಂದಿಯನ್ನು ಸಾಕ್ಷಿಗಳನ್ನಾಗಿ ಹೆಸರಿಸಲಾಗಿದೆ. ಅದರಲ್ಲಿ ಆಂಜನೇಯ 2 ನೇಯ ಪ್ರಮುಖ ಸಾಕ್ಷಿ. ಆಂಧ್ರದ ಪೊಲೀಸ್ ಅಧಿಕಾರಿಯೊಬ್ಬರು ಮೊದಲ, ಮಹತ್ವದ ಸಾಕ್ಷಿ. ಆಂಜನೇಯ ಜೀವಕ್ಕೆ ಅಪಾಯವಿದೆ ಎಂದು ಅರಿತ ಸಿಬಿಐ ಜಂಟಿ ನಿರ್ದೇಶಕ ವಿವಿ ಲಕ್ಷ್ಮಿನಾರಾಯಣ, ಆರಂಭದಿಂದಲೂ ಬೆಂಗಳೂರು ಪೊಲೀಸರಿಂದ ಆತನಿಗೆ ಸಂಪೂರ್ಣ ಭದ್ರತೆ ಒದಗಿಸಿದ್ದಾರೆ.
ದಿನದ 24 ಗಂಟೆಯೂ ಆಂಜನೇಯಗೆ ಭದ್ರತೆ ಕಲ್ಪಿಸಲಾಗಿದೆ. ಒಬ್ಬ ಪೊಲೀಸ್ ಪೇದೆ ಸದಾ ಅವರ ರಕ್ಷಣೆಗೆ ನಿಂತಿರುತ್ತಾರೆ. 'ಮೊನ್ನೆ, ಮಾರುತಿ ವ್ಯಾನಿನಲ್ಲಿ ನಾಲ್ಕು ಮಂದಿ ನನ್ನನ್ನು ಹಿಂಬಾಲಿಸುತ್ತಿದ್ದುದು ಕಣ್ಣಿಗೆ ಬಿತ್ತು. ಅಂದಿನಿಂದ ಬೆಳಗಿನ ವಾಯುವಿಹಾರವನ್ನೂ ನಿಲ್ಲಿಸಿಬಿಟ್ಟೆ. ಆದರೆ ನಾನು ಡಯಾಬಿಟಿಕ್. ಅದಕ್ಕೋಸ್ಕರ ಟ್ರೆಡ್ ಮಿಲ್ ಖರೀದಿಸಿ, ಮನೆಯಲ್ಲೇ ವಾಕ್ ಮಾಡುತ್ತಿರುವೆ' ಎಂದು ಆಂಜನೇಯ ತಮ್ಮ ಪರಿಸ್ಥಿತಿಯನ್ನು ವಿವರಿಸುತ್ತಾರೆ.