ರೆಡ್ಡಿ ಗಣಿ ಇಂಜಿನಿಯರ್ ಆಂಜನೇಯ ಯಾರು, ಎತ್ತ?
'ಹೈದರಾಬಾದಿನ ಕೊಠಿಯಲ್ಲಿರುವ ಸಿಬಿಐ ಕಚೇರಿಗೆ ಇದುವರೆಗೆ 7-8 ಬಾರಿ ಭೇಟಿ ನೀಡಿ, ಸಾಕ್ಷ್ಯ ದಾಖಲಿಸಿದ್ದೇನೆ. ಲಕ್ಷ್ಮಿನಾರಾಯಣ ಖುದ್ದು ಆಸ್ಥೆ ವಹಿಸಿ, ನನ್ನ ರಕ್ಷಣೆಗೆ ನಿಂತಿದ್ದಾರೆ. ಆದರೂ ರೆಡ್ಡಿ ಬೆಂಗಳೂರು ಜೈಲಿಗೆ ವರ್ಗವಾದ ಬಳಿಕ ನನಗೆ ಆತಂಕ ಹೆಚ್ಚಾಗಿದೆ' ಎನ್ನುತ್ತಾರೆ ಆಂಜನೇಯ.
ಅಂದಹಾಗೆ, ಆಂಜನೇಯ ಅವರು ರೆಡ್ಡಿಯ ಎಎಂಸಿ ಗಣಿ ಕಂಪನಿಯಲ್ಲಿ ಐದೂವರೆ ವರ್ಷ ಕಾಲ ಕ್ಲಾಸ್ ಒನ್ ಮೈನ್ಸ್ ಮ್ಯಾನೇಜರ್ ಆಗಿದ್ದವರು. ಸಂಡೂರಿನ ಡೆಕ್ಕನ್ ಮೈನಿಂಗ್ ಸಿಂಡಿಕೇಟ್ ನಲ್ಲೂ ಕೆಲ ಕಾಲ ಹಿರಿಯ ಅಧಿಕಾರಿಯಾಗಿ ದುಡಿದಿದ್ದಾರೆ. ಇಂತಿಪ್ಪ ಆಂಜನೇಯ, ರೆಡ್ಡಿಯನ್ನು ಸಿಬಿಐ ಬಂಧಿಸುತ್ತಿದ್ದಂತೆ ಲಕ್ಷ್ಮಿನಾರಾಯಣ ಬಳಿಗೆ ಓಡೋಡಿ ಹೋದರು. 'ರೆಡ್ಡಿ ವಿರುದ್ಧ ನಾನು ಸಾಕ್ಷ್ಯ ನುಡಿಯುತ್ತೇನೆ. ಏಕೆಂದರೆ ನಾನು ಆತನ ಗಣಿ ಕಂಪನಿಯಲ್ಲಿ ಕೆಲಸ ಮಾಡಿದ್ದೆ. ನನಗೆ ಆತನ ರಾಮ-ಕೃಷ್ಣ ಲೆಕ್ಕಗಳೆಲ್ಲ ಚೆನ್ನಾಗಿ ಗೊತ್ತು' ಎಂದಿದ್ದಾರೆ.
ಲಕ್ಷ್ಮಿನಾರಾಯಣ ಅವರಿಗೋ... ಚಿನ್ನದ ಗಣಿಯೇ ಸಿಕ್ಕಿದಂತಾಗಿದೆ. ತಕ್ಷಣ, ಮೊದಲು ಆಂಜನೇಯರನ್ನು ರಕ್ಷಿಸಿಟ್ಟುಕೊಂಡು ಒಂದೊಂದೇ ಗಣಿ ರಹಸ್ಯಗಳನ್ನು ಬೇಧಿಸಿದ್ದಾರೆ. ತನ್ಮೂಲಕ ರೆಡ್ಡಿ ವಿರುದ್ಧ ಗಣಿ ಕುಣಿಕೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ.
ಈ ಮಧ್ಯೆ, ಆಂಜನೇಯ ಮನೆಗೆ ಭದ್ರತೆ ನೀಡುತ್ತಿದ್ದ ಪೊಲೀಸರು ಒಂದು ದಿನ ಹೇಳದೆ ಕೇಳದೆ ನಾಪತ್ತೆಯಾಗಿ, ಆತಂಕ ಸೃಷ್ಟಿಸಿದ್ದರು. ಆದರೆ ಲಕ್ಷ್ಮಿನಾರಾಯಣರಿಂದ ೊಂದು ಫೋನ್ ಬರುತ್ತಿದ್ದಂತೆ ಸ್ಥಳೀಯ ಪೊಲೀಸರು ಸೊಂಟಕ್ಕೆ ಕಟ್ಟಿದ್ದ ಬೆಲ್ಟ್ ಅನ್ನು ಬಿಗಿಗೊಳಿಸಿಕೊಂಡು, ಆಂಜನೇಯನ ಸೇವೆಗೆ ಖಡಕ್ಕಾಗಿ ನಿಂತಿದ್ದಾರೆ.