'ಎಪ್ಪತ್ತಲ್ಲ ಎಲ್ಲ ನೂರಿಪ್ಪತ್ತೂ ಶಾಸಕರ ಬೆಂಬಲವಿದೆ'
ಪಕ್ಷದ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ 70 ಅಲ್ಲ; ಎಲ್ಲ 120 ಶಾಸಕರ ಬೆಂಬಲವಿದೆ ಎಂದು ಅವರು ವ್ಯಂಗ್ಯ ಧಾಟಿಯಲ್ಲಿ ಚಾಟಿ ಏಟು ಕೊಟ್ಟಿದ್ದಾರೆ. ಆದರೆ ಮುಖ್ಯಮಂತ್ರಿಯಾಗಿ ಸದಾನಂದ ಗೌಡರೇ ಮುಂದುವರಿಯತ್ತಾರೆ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ಬ್ಯಾಡಗಿ ತಾಲೂಕಿನ ಕಾಗಿನಲೆ ಕನಕಗುರುಪೀಠದ ಕಾರ್ಯಕ್ರಮ ಸಂದರ್ಭದಲ್ಲಿ ಭಾನುವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
'ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಿಲ್ಲ. ನಮ್ಮದು ರಾಷ್ಟ್ರ ನಿಷ್ಠೆಯಿರುವ ಪಕ್ಷವೇ ಹೊರತು ವ್ಯಕ್ತಿ ನಿಷ್ಠೆಯಲ್ಲ. ಇಲ್ಲಿ ಪಕ್ಷವೇ ಮುಖ್ಯ. ಗೊಂದಲ ಸೃಷ್ಟಿಸುತ್ತಿರುವವರಿಗೆ ಟಿಕೆಟ್ ಕೊಡೊಲ್ಲ' ಎಂದು ಚಾಟಿಯೇಟು ಬೀಸಿದ ಅವರು ಪಕ್ಷಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರಿಗೆ ಟಿಕೆಟ್ ಮತ್ತು ಪಕ್ಷ ನಿಷ್ಠರಿಗೆ ಮಾತ್ರ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಿ 150ಕ್ಕೂ ಹೆಚ್ಚು ಸ್ಥಾನ ಗೆದ್ದು ಬರುತ್ತೇವೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ಕೆಲವೊಂದು ಭಿನ್ನಾಭಿಪ್ರಾಯಗಳು, ಸಣ್ಣ ಪುಟ್ಟ ಗೊಂದಲಗಳು ಇವೆ. ಅವುಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ಅಟಲ್ ಬಿಹಾರಿ ವಾಜಪೇಯಿ ಅವರ ತಪಸ್ಸಿನ ಫಲದಿಂದ ಅಧಿಕಾರದಲ್ಲಿದ್ದೇವೆ. ಎಲ್ಲ ಬಗೆಯ ಗೊಂದಲ ನಿವಾರಿಸಿಕೊಳ್ಳುತ್ತೇವೆ. ನಾವೆಲ್ಲ ಒಂದು ಕುಟುಂಬದ ಸಹೋದರರಿದ್ದಂತೆ ಎಂದರು.