ಪ್ರಶ್ನೆ ಪತ್ರಿಕೆ ಬಯಲು : ಇನ್ನೂ ಹತ್ತು ಜನರ ಬಂಧನ

ಈ ಸಂಗತಿಯನ್ನು ಸಿಐಡಿ ಡಿಜಿ ಆಗಿರುವ ಐ.ಕೆ. ದತ್ತಾ ಅವರು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು. ಬಂಧಿತರನ್ನು ಜಿ ಪ್ರಹ್ಲಾದ್, ಟಿ ಸೊಣ್ಣಪ್ಪ, ಎಚ್ಎಸ್ ಸುನೀಲ್, ಮುನ್ವರ್ ಬಾಷಾ, ಸಿದ್ದರಾಮಯ್ಯ, ಯೋಗೇಶ್ವರ್, ರವಿಕುಮಾರ್, ಶಶಿಧರ್, ಅನಿಲ್ ರಾವುತ್, ಸಿಪಿ ರಮೇಶ್ ಎಂದು ಗುರುತಿಸಲಾಗಿದೆ. ಇವರಲ್ಲಿ ಕೆಲವರು ಶಿಕ್ಷಕರಾಗಿದ್ದರೆ ಹಲವರು ಕಾಲೇಜು ಸಿಬ್ಬಂದಿಗಳಾಗಿದ್ದಾರೆ.
ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆಗಳು ಬಯಲಾದ ಹಿನ್ನೆಲೆಯಲ್ಲಿ ವೇಳಾಪಟ್ಟಿಯನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿತ್ತು. ಪರಿಷ್ಕರಣೆಯ ಪ್ರಕಾರ, ಮಾರ್ಚ್ 24ರಂದು ಮತ್ತೆ ಆರಂಭವಾಗಿರುವ ಪರೀಕ್ಷೆಗಳು ಏಪ್ರಿಲ್ 5ರಂದು ಕೊನೆಯಾಗುತ್ತಿವೆ. ಒಟ್ಟು 5,96,739 ವಿದ್ಯಾರ್ಥಿಗಳ ಭವಿಷ್ಯವನ್ನು ಈ ಪರೀಕ್ಷೆಗಳು ನಿರ್ಧರಿಸಲಿವೆ.
ಈ ಪರೀಕ್ಷೆಗಳ ನಡುವೆಯೂ ಕೆಲ ಪ್ರಶ್ನೆಪತ್ರಿಕೆಗಳು ಬಯಲಾದ ಸುದ್ದಿ ಹಬ್ಬಿತ್ತು. ಆದರೆ, ಎಚ್ಚೆತ್ತುಕೊಂಡಿದ್ದ ಪದವಿಪೂರ್ವ ಶಿಕ್ಷಣ ಮಂಡಳಿ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಭಾಗೀ ಬಿಗಿಭದ್ರತೆ ಒದಗಿಸಿತ್ತು ಮತ್ತು ಯಾವುದೇ ಗಾಳಿಸುದ್ದಿ ಹರಡಲು ಅವಕಾಶ ನೀಡಿರಲಿಲ್ಲ. ಬಂಧಿತರಾಗಿರುವವರು ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯಕ್ಕೆ ಇಳಿದಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಕೋಲಾರದ ಮೂರು ಶಿಕ್ಷಕರನ್ನು ಬಂಧಿಸಲಾಗಿತ್ತು.
ಎಸ್ಸೆಸ್ಸೆಲ್ಸಿ ಪರೀಕ್ಷೆ, ಡಿಬಾರ್ : ಏ.2ರಿಂದ 2012ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಗಳು ಕೂಡ ಆರಂಭವಾಗಿದ್ದು, ಕಾಪಿ ಹೊಡೆಯುವಲ್ಲಿ ತೊಡಗಿದ್ದ 33 ವಿದ್ಯಾರ್ಥಿಗಳನ್ನು ರಾಜ್ಯಾದ್ಯಂತ ಡಿಬಾರ್ ಮಾಡಲಾಗಿದೆ. ಕೋಲಾರದಲ್ಲಿ 18, ಬಿಜಾಪುರದಲ್ಲಿ 10, ಗುಲಬರ್ಗದಲ್ಲಿ 3, ಚಿಕ್ಕಮಗಳೂರಿನಲ್ಲಿ 1, ಚಿಕ್ಕಬಳ್ಳಾಪುರದಲ್ಲಿ 1 ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications