ಮತ್ತೆ ಶಶಿಕಲಾ ಅಪ್ಪಿಕೊಂಡ ಜಯಲಲಿತಾ
ಶಶಿಕಲಾರನ್ನು ಕಳೆದ ವರ್ಷ ಅಣ್ಣಾ ಎಡಿಎಂಕೆಯಿಂದ ಉಚ್ಛಾಟಿಸಿ ಹೊರಡಿಸಿದ್ದ ಆದೇಶವನ್ನು ಪಕ್ಷದ ಮುಖ್ಯಸ್ಥೆ ಜಯಾ ಶನಿವಾರ ಹಿಂತೆಗೆದುಕೊಂಡಿದ್ದಾರೆ. ಶಶಿಕಲಾ ಮೇಲೆ ಕೈಗೊಳ್ಳಲು ಉದ್ದೇಶಿಸಲಾಗಿದ್ದ ಶಿಸ್ತುಕ್ರಮವನ್ನು ಕೂಡ ರದ್ದುಗೊಳಿಸಲಾಗಿದೆ ಎಂದು ಜಯಲಲಿತಾ ಹೇಳಿದರು. ಡಿಸೆಂಬರ್ ಕೊನೆಯಲ್ಲಿ ಶಶಿಕಲಾ ಮತ್ತು ಇತರ 13ಮಂದಿಯನ್ನು ಜಯಲಲಿತಾ ಅವರು ಪಕ್ಷದಿಂದ ಉಚ್ಚಾಟಿಸಿದ್ದರು. ಶಶಿಕಲಾ ಅವರು ಜಯಲಲಿತಾ ಅವರಿಂದ ಒಮ್ಮೆ ದೂರವಾಗಿ ಮತ್ತೆ ಹತ್ತಿರಬರುತ್ತಿರುವುದು ಇದು ಎರಡನೇ ಬಾರಿಯಾಗಿದೆ.
'ಶಶಿಕಲಾ ನನಗೆ ವಿವರವಾಗಿ ಬರೆದಿರುವ ಪತ್ರವನ್ನು ಒಪ್ಪಿಕೊಂಡು ಅವರ ವಿರುದ್ಧದ ಶಿಸ್ತು ಕ್ರಮದ ಆದೇಶವನ್ನು ರದ್ದುಪಡಿಸಿದ್ದೇನೆ ಎಂದು ಜಯಲಲಿತಾ ಒಂದು ಸಾಲಿನ ವಿವರಣೆ ನೀಡಿದ್ದಾರೆ. ಪಕ್ಷದ ಮುಖ್ಯಸ್ಥೆ ಜಯಲಲಿತಾಗೆ ವಂಚನೆ ಮಾಡಿರುವ ತನ್ನ ಕುಟುಂಬಿಕರೊಂದಿಗೂ ತಾನು ಸಂಬಂಧವನ್ನು ಕಳಚಿಕೊಂಡಿದ್ದೇನೆ ಎಂದು ಶಶಿಕಲಾ ಹೇಳಿಕೆಯೊಂದನ್ನು ನೀಡಿದ ಬಳಿಕ ಜಯಲಲಿತಾರ ಈ ನಿರ್ಧಾರ ಹೊರಬಿದ್ದಿದೆ.
ಆದರೆ ಶಶಿಕಲಾ ಪತಿ ನಟರಾಜನ್ ಹಾಗೂ ಸಂಬಂಧಿಕರ ವಿರುದ್ಧ ತೆಗೆದುಕೊಂಡಿರುವ ಶಿಸ್ತು ಕ್ರಮ ಮುಂದುವರಿದಿದೆ. ಶಶಿಕಲಾರ ಪತಿ ನಟರಾಜನ್ ಮತ್ತು ಸಹೋದರ ದಿವಾಕರನ್ರನ್ನು ಅಕ್ರಮ ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆ. ಪಕ್ಷದ ಕಾರ್ಯಕರ್ತರು ಅವರೊಂದಿಗೆ ಯಾವುದೇ ಸಂಪರ್ಕ ಹೊಂದಕೂಡದು' ಎಂದು ಜಯಾ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರ ಬೆನ್ನಿಗೆ ಯಾರು ಇರಿದಿದ್ದಾರೋ, ಅವರೆಲ್ಲರೊಂದಿಗೆ ನಾನು ಸಂಬಂಧವನ್ನು ಮುರಿದಿದ್ದೇನೆ' ಎಂದು ಶಶಿಕಲಾ ಬುಧವಾರ ಜಯಾ ಟಿವಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದರು. 'ಆಕೆಯ ವಿರುದ್ಧ ಕೆಲಸ ಮಾಡಿರುವ ನನ್ನ ಕುಟುಂಬಸ್ಥರನ್ನೂ ನಾನು ಕ್ಷಮಿಸುವುದಿಲ್ಲ' ಎಂದು ಶಶಿಕಲಾ ಹೇಳಿದ್ದರು.