ವಿದ್ಯಾರ್ಥಿಗಳೊಂದಿಗೆ ಚೆಲ್ಲಾಟವಾಡಿದ ಕೋಲಾರದ ಮೇಷ್ಟ್ರು

ಚಿಂತಾಮಣಿಯ ಕೆಲ ಖಾಸಗಿ ಪಿಯುಸಿ ಕಾಲೇಜಿನಲ್ಲಿ ಕೆಲ ವಿಷಯಗಳ ಪ್ರಶ್ನೆಪತ್ರಿಕೆ ಬಯಲಾಗಿರುವ ಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಕೋಲಾರ ಜಿಲ್ಲೆ ಶ್ರೀನಿವಾಸಪುರ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ ಮತ್ತು ವಾಸು ಜೀವಶಾಸ್ತ್ರ ಉಪನ್ಯಾಸಕ ಶ್ರೀನಿವಾಸರೆಡ್ಡಿ ಮತ್ತು ಬಾಲಕರ ಕಾಲೇಜಿಲ್ಲಿ ರಸಾಯನಶಾಸ್ತ್ರ ಉಪನ್ಯಾಸಕರಾಗಿರುವ ಕೃಷ್ಣಾರೆಡ್ಡಿ.
ಇವರ ಜೊತೆಗೆ ಶಿಡ್ಲಘಟ್ಟ ಸರ್ಕಾರಿ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕ ಬೈರಾರೆಡ್ಡಿ ಸಹ ಇರುವುದಾಗಿ, ಇವರೆಲ್ಲ ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನವರಾಗಿದ್ದು ಕೆಲವರೊಂದಿಗೆ ಸೇರಿ ಚಿಂತಾಮಣಿ ನಗರದಲ್ಲಿ ಬೆನಾಮಿ ಹೆಸರಿನಲ್ಲಿ ವೆಂಕಟಾದ್ರಿ ಖಾಸಗಿ ಪದವಿ ಪೂರ್ವ ಕಾಲೇಜು ನಡೆಸುತ್ತಿದ್ದಾರೆ. ಜೊತೆಗೆ ಅದರಲ್ಲಿ ಉಪನ್ಯಾಸಕರಾಗಿ ಎರಡೂ ಕಡೆಯಿಂದ ಸಂಬಳ ಗಿಂಜಿಕೊಳ್ಳುತ್ತಿದ್ದಾರೆ.
ಸರ್ಕಾರಿ ಕಾಲೇಜು ಉಪನ್ಯಾಸಕರಾಗಿ ಶ್ರೀನಿವಾಸಪುರ ಕಾಲೇಜಿನಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಅಪರೂಪಕ್ಕೊಮ್ಮೆ ಕಾಲೇಜಿಗೆ ಬಂದು ಹೋಗುತ್ತಿದ್ದರು ಎನ್ನುವಂತಹ ದೂರು ಇವರ ಮೆಲೆ ಇದೆ. ವಾಸು ಎಂಬ ಮೇಷ್ಟ್ರು ಕೂಡ ಕಳೆದ ಏಳೆಂಟು ತಿಂಗಳಿನಿಂದ ಅನಾರೊಗ್ಯದ ನೆಪ ಒಡ್ಡಿ ರಜಾ ಹಾಕಿದ್ದರು. ಈಗ ಎರಡು ತಿಂಗಳಿನಿಂದ ಶ್ರೀನಿವಾಸಪುರದ ಕಾಲೇಜಿಗೆ ಬರುತ್ತಿರುವುದಾಗಿ ಇಲ್ಲಿನ ವಿದ್ಯಾರ್ಥಿಗಳು ಹೇಳುತ್ತಾರೆ.
ರಜೆಯ ಮೆಲಿದ್ದ ವಾಸು ಸಂಪೂರ್ಣವಾಗಿ ತನ್ನ ಬೆನಾಮಿ ಒಡೆತನದ ವೆಂಕಟಾದ್ರಿ ಕಾಲೇಜಿನಲ್ಲಿ ತೊಡಗಿಸಿಕೊಂಡಿದ್ದ ಎನ್ನುವಂತಹ ಗಂಭೀರ ಆರೋಪ ಮಾಡಲಾಗಿದೆ. ಉಳಿದಂತೆ ಶ್ರೀನಿವಾಸರೆಡ್ಡಿ ಮತ್ತು ಕೃಷ್ಣಾರೆಡ್ಡಿ ನಾಮಕಾವಸ್ತೆ ಸರ್ಕಾರಿ ಕಾಲೇಜಿಗೆ ಬಂದು ಹೋಗುತ್ತಿದ್ದರು. ಇದರೊಂದಿಗೆ ವೆಂಕಟಾದ್ರಿ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿರುವ ಬಹುತೇಕ ವಿದ್ಯಾರ್ಥಿಗಳು ಶ್ರೀನಿವಾಸಪುರ ತಾಲೂಕಿನವರೆ.
ಪ್ರಥಮ ಪಿಯು ಅನ್ನು ಇಲ್ಲಿನ ಸರ್ಕಾರಿ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಅವರ ಆರ್ಥಿಕ ಶೈಕ್ಷಣಿಕ ಗುಣಮಟ್ಟದ ಆಧಾರದಲ್ಲಿ ಗುರುತಿಸಿ ಅವರ ಪೋಷಕರನ್ನು ಕಂಡು ಮಾತನಾಡಿ ನಿಮ್ಮ ಮಗು ಇಲ್ಲೆ ಓದು ಮುಂದುವರೆಸಿದರೆ ಉತ್ತಮ ಭವಿಷ್ಯ ಇರುವುದಿಲ್ಲ ಎಂದು ಅವರನ್ನು ಒಲೈಸಿ ಎರಡನೇ ವರ್ಷದ ಅಭ್ಯಾಸಕ್ಕೆ ತಮ್ಮ ಒಡೆತನದ ಚಿಂತಾಮಣಿ ಖಾಸಗಿ ಕಾಲೇಜಿಗೆ ರವಾನಿಸಿಕೊಳ್ಳುತ್ತಾರೆ.
ಚಿಂತಾಮಣಿಯ ಮತ್ತು ಎರಡು ಪಿಯು ಖಾಸಗಿ ಕಾಲೇಜುಗಳಾದ ವಿಜಯ ಹಾಗು ರಾಯಲ್ ಕಾಲೇಜುಗಳು ಸೇರಿದಂತೆ ವೆಂಕಟಾದ್ರಿ ಕಾಲೇಜಿನ ಮಾನ್ಯತೆಯನ್ನು ರದ್ದುಮಾಡಿ ಉಪನ್ಯಾಸಕ ವಾಸುವನ್ನು ಅಮಾನತ್ತು ಮಾಡಿ ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿ ಆದೇಶ ಹೊರಡಿಸಿರುವ ಬಗ್ಗೆ ವೆಂಕಟಾದ್ರಿ ಶಾಲೆಯ ಪೋಷಕರು ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ. ಆದರೆ ತಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯತ್ತಿನ ಬಗ್ಗೆ ಸರ್ಕಾರ ವಿಶೇಷ ಕಾಳಜಿ ವಹಿಸುವಂತೆ ಆಗ್ರಹಿಸಿರುತ್ತಾರೆ.











Click it and Unblock the Notifications