ಗದಗ: ಶ್ರೀರಾಮುಲು ಉಪವಾಸ ಆರಂಭ
ಇಂದು ಮತ್ತು ನಾಳೆಯ (ಮಾ. 13, 14) ಉಪವಾಸ ಸತ್ಯಾಗ್ರಹಕ್ಕಾಗಿ ಗದುಗಿನ ವಿದ್ಯಾದಾನ ಸಮಿತಿ ಹೈಸ್ಕೂಲ್ ಮೈದಾನದಲ್ಲಿ 200 ಅಡಿ ಅಗಲ, 600 ಅಡಿ ಉದ್ದದ ಬೃಹತ್ ಬೃಹತ್ ಪೆಂಡಾಲ್ ಮತ್ತು ವೇದಿಕೆ ನಿರ್ಮಿಸಲಾಗಿದೆ.
ಗದಗ ಜಿಲ್ಲೆಯ ಜನತೆಯ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾದ ಶ್ರೀರಾಮುಲು ಗದುಗಿನ ನೆಲದಲ್ಲೇ ತಮ್ಮ ರಾಜಕೀಯ ಜೀವನದ ಹೋರಾಟಕ್ಕೆ ಚಾಲನೆ ನೀಡಬೇಕೆಂಬ ಉದ್ದೇಶದಿಂದ ನಗರದಲ್ಲಿ ಹಮ್ಮಿಕೊಂಡ ಎರಡು ದಿನಗಳ ಉತ್ತರಕ್ಕಾಗಿ ಉಪವಾಸ ಸತ್ಯಾಗ್ರಹಕ್ಕೆ ಜಿಲ್ಲೆಯ ವಿವಿಧ ಸಂಘಟನೆಗಳ ಕಾರ್ಯಕರ್ತರು, ಮಠಾಧೀಶರು ಬೆಂಬಲ ವ್ಯಕ್ತಪಡಿಸಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿ ಹಮ್ಮಿಕೊಂಡ ಹೋರಾಟದಲ್ಲಿ ನೂರೆಂಟು ಪ್ರಶ್ನೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅವರು ಉತ್ತರ ಕೇಳಲಿದ್ದಾರೆ.
ಮೆರವಣಿಗೆ: ಉಪವಾಸ ಸತ್ಯಾಗ್ರಹದ ಪ್ರಾರಂಭಕ್ಕೂ ಪೂರ್ವದಲ್ಲಿ ಶಾಸಕ ಬಿ. ಶ್ರೀರಾಮುಲು ಅವರು ಮಂಗಳವಾರ ಬೆಳಗ್ಗೆ 8 ಗಂಟೆಗೆ ವೀರೇಶ್ವರ ಪುಣ್ಯಾಶ್ರಮ, ಗಣಪತಿ ದೇವಸ್ಥಾನ, ಚರ್ಚ್, ಜುಮ್ಮಾ ಮಸೀದಿ, ತೋಂಟದಾರ್ಯ ಮಠಕ್ಕೆ ಭೇಟಿ ನೀಡಿ ಗದ್ದುಗೆ ಮತ್ತು ಪೂಜ್ಯರ ದರ್ಶನ ಪಡೆಯಲಿದ್ದಾರೆ.
ಬೆಳಗ್ಗೆ 8:30ಕ್ಕೆ ಜ. ತೋಂಟದಾರ್ಯ ಮಠದಿಂದ ಶ್ರೀರಾಮುಲು ಅವರು ಸಾವಿರಾರು, ಸಾರ್ವಜನಿಕರು, ಬೆಂಬಲಿಗರೊಂದಿಗೆ ಚಕ್ಕಡಿಯಲ್ಲಿ ಮೆರವಣಿಗೆ ಆರಂಭಿಸುವರು. ಭೂಮರಡ್ಡಿ ವೃತ್ತದಲ್ಲಿನ ಡಾ. ಪಂಡಿತ ಪುಟ್ಟರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸತ್ಯಾಗ್ರಹದ ವೇದಿಕೆಗೆ ಆಗಮಿಸಿದ ನಂತರ ಸತ್ಯಾಗ್ರಹ ಆರಂಭವಾಗಲಿದೆ.
ಬೆಳಗ್ಗೆ 10:30ಕ್ಕೆ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರ ಸಾನ್ನಿಧ್ಯದಲ್ಲಿ ಉತ್ತರಕರ್ನಾಟಕ ಭಾಗದ ರೈತ ಧುರೀಣರೊಬ್ಬರಿಂದ ಉತ್ತರಕ್ಕಾಗಿ ಉಪವಾಸ ಹೋರಾಟ ಚಾಲನೆಗೊಳ್ಳಲಿದೆ.
ನಾಳೆ ಕಾರ್ಯಕ್ರಮ: ಮಾ.14ರಂದು ಮಧ್ಯಾಹ್ನ 2 ಗಂಟೆಗೆ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಸಮಾವೇಶ ನಡೆಯಲಿದೆ. ಉತ್ತರ ಕರ್ನಾಟಕ ಭಾಗದ 50ಕ್ಕೂ ಹೆಚ್ಚು ಸ್ವಾಮೀಜಿಗಳು, ಅನೇಕ ಸಾಹಿತಿಗಳು, ಬುದ್ದಿಜೀವಿಗಳು ಪಾಲ್ಗೊಳ್ಳಲಿದ್ದಾರೆ.
ಊಟದ ವ್ಯವಸ್ಥೆ: ಶ್ರೀರಾಮುಲು ಅವರ ಸತ್ಯಾಗ್ರಹ ಬೆಂಬಲಿಸಿ ಹೋರಾಟದಲ್ಲಿ ಪಾಲ್ಗೊಳ್ಳುವ ಲಕ್ಷಾಂತರ ಸಾರ್ವಜನಿಕರಿಗಾಗಿ ಎಪಿಎಂಸಿ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.