ಅನಂತಕುಮಾರ್ ಅಖಾಡಕ್ಕೆ: ಯಡ್ಡಿ ಬಹುದೂರ

ಇದು ಲೋಕಸಭೆಗೆ ನಡೆಯುತ್ತಿರುವ ಉಪಚುನಾವಣೆ. ಆದ್ದರಿಂದ ಪಕ್ಷದ ಸಂಸದನಾಗಿ ಪ್ರಚಾರಕ್ಕಿಳಿಯುವುದು ಅತ್ಯಗತ್ಯ ಎಂದು ಸನ್ಮಾನ್ಯ ಅನಂತ್ ಕುಮಾರ್ ಹೇಳಿಕೊಂಡರೂ ಯಡಿಯೂರಪ್ಪ ವಿರುದ್ಧ ತಮ್ಮ ಕೈ ಮೇಲಾಗಿರುವುದರಿಂದ ರಾಜ್ಯ ರಾಜಕೀಯದಲ್ಲಿ ಚಾಲ್ತಿಗೆ ಬರಲು ಅವರು ಹವಣಿಸುತ್ತಿರುವುದು ವೇದ್ಯವಾಗುತ್ತದೆ.
ಇಂದು ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಅಧಿಕೃತವಾಗಿ ನಾಮಪತ್ರ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಅನಂತಕುಮಾರ್ ಅಗತ್ಯಕ್ಕಿಂತ ಹೆಚ್ಚಿಗೇ ಇದನ್ನು ಪ್ರೂವ್ ಮಾಡಿದ್ದಾರೆ. ಜತೆಗೆ ಅವರೇ ಅದನ್ನು ಪರೋಕ್ಷವಾಗಿ ಘೋಷಿಸಿಯೂ ಬಿಟ್ಟರು. ಈ ಬಾರಿ ಉಡುಪಿ-ಚಿಕ್ಕಮಗಳೂರು ಉಪಚುನಾವಣೆಯನ್ನು ಹಾಲಿ ಸಿಎಂ ಡಿವಿ ಸದಾನಂದಗೌಡ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಅವರ ನಾಯಕತ್ವದಲ್ಲೇ ಅಖಾಡಕ್ಕೆ ಧುಮುಕುವುದಾಗಿ ಅನಂತ್ ಪ್ರಕಟಿಸಿದ್ದಾರೆ.
ಈ ವೇಳೆ ಅವರು ಈ ಹಿಂದಿನ ಎಲ್ಲ ಉಪಚುನಾವಣೆಗಳಲ್ಲೂ ಸಕ್ರಿಯವಾಗಿ ಪ್ರಚಾರಕ್ಕಿಳಿಯುತ್ತಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರ ಹೆಸರನ್ನು ಅಪ್ಪಿತಪ್ಪಿಯೂ ಹೇಳುವ ಗೋಜಿಗೆ ಹೋಗಲಿಲ್ಲ. ಡಿವಿ ಎಸ್, ಈಶ್ವರಪ್ಪ ಮತ್ತಿತರ ನಾಯಕರ ಸಮ್ಮುಖದಲ್ಲಿ ಅನಂತ್ ನಾಯಕತ್ವ ವಿಚಾರವನ್ನು ಹೇಳಿರುವುದು ಈ ಬಾರಿ ಪ್ರಚಾರದಿಂದ ಯಡಿಯೂರಪ್ಪ ವಿಮುಖವಾಘಲಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಆದರೂ ಕಳೆದ ಬಾರಿ ತಮ್ಮ ಗೆಲುವಿಗೆ ಯಡಿಯೂರಪ್ಪನವರ ಆಶೀರ್ವಾದವೇ ಕಾರಣ ಎಂಬುದನ್ನು ಚೆನ್ನಾಗಿ ಅರಿತಿರುವ ಸದಾನಂದ ಗೌಡರು ಈಶ್ವರಪ್ಪ ಜತೆಗೂಡಿ ನಾಮಪತ್ರ ಸಲ್ಲಿಕೆ ವೇಳೆ ಯಡಿಯೂರಪ್ಪನವರ ಅನುಪಸ್ಥಿತಿಗೆ ಬೇರೆ ಅರ್ಥ ಕಲ್ಪಿಸಬೇಡಿ. ಮುಂದೆ ಅವರು ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಿದ್ದಾರಾದರೂ ಯಡಿಯೂರಪ್ಪನವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಈಗಾಗಲೇ ಬಹುದೂರುಳಿದಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಕಾಂಗ್ರೆಸ್ಸಿಗೆ ಲಾಭ: ಹೋಗ್ಲಿ, ಕರ್ನಾಟಕದ ಹಕ್ಕ-ಬುಕ್ಕರಂತಿದ್ದ ಅನಂತ್ -ಯಡಿಯೂರಪ್ಪ ಕಾಲೆಳೆದಾಟದಲ್ಲಿ ಯಾರಿಗೆ ಪ್ರಯೋಜನವಾದೀತು ಅಂದರೆ ಕಾಂಗ್ರೆಸ್ಸಿನ ಸಜ್ಜನ ಜಯಪ್ರಕಾಶ್ ಹೆಗ್ಗಡೆಗೆ ಇದರ ಸಂಪೂರ್ಣ ಲಾಭವಾಗುವ ಲೆಕ್ಕಾಚಾರವಿದೆ. ಹಾಗಾಗುತ್ತದಾ? ಕ್ಷೇತ್ರದ ಮತದಾರರು ಇದಕ್ಕೆ ಉತ್ತರಿಸಬೇಕು.











Click it and Unblock the Notifications