ಭಾರತದ ಎಲ್ಲಾ ನದಿಗಳ ಜೋಡಣೆಗೆ ಸುಪ್ರೀಂ ಅಸ್ತು
ರಾಷ್ಟ್ರೀಯ ಹಿತಾಸಕ್ತಿಯಿಂದ ಈ ಯೋಜನೆಗೆ ಅನುಮತಿ ನೀಡಲು ಕೋರ್ಟ್ ಗೆ ಯಾವುದೇ ಅಭ್ಯಂತರವಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಯೋಜನೆ ಏಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ನ್ಯಾ. ಸ್ವತಂತರ್ ಕುಮಾರ್ ಅವರು ತಮ್ಮ ಆದೇಶದಲ್ಲಿ ಪ್ರಶ್ನಿಸಿದ್ದಾರೆ.
ಈ ಯೋಜನೆಯನ್ನು ಆದಷ್ಟೂ ಬೇಗ ಕಾರ್ಯಗತ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ. ಜಲ ಸಂಪನ್ಮೂಲ ಖಾತೆ ಸಚಿವರ ನೇತೃತ್ವದಲ್ಲಿ ಸಮಿತಿ ರಚಿಸಿ ಯೋಜನೆಯ ಮಾರ್ಗ ಸೂಚಿ ತಯಾರಿಸುವಂತೆ ಆದೇಶದಲ್ಲಿ ಹೇಳಲಾಗಿದೆ.
ಎರಡು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ಸಮಿತಿ ನೀಡಿದ ಶಿಫಾರಸನ್ನು ಸಚಿವ ಸಂಪುಟ 30 ದಿನದೊಳಗೆ ಚರ್ಚಿಸಿ, ಸಮ್ಮತಿ ಸೂಚಿಸಬೇಕು ಎಂದು ಕೋರ್ಟ್ ಹೇಳಿದೆ.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಹಲವಾರು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ನದಿ ಜೋಡಣೆ ಯೋಜನೆಗೆ ಮರು ಜೀವ ನೀಡಿದ್ದರು.
ಆದರೆ, ನಂತರ ಗಂಗಾ ಕಾವೇರಿಯೋಜನೆಗೆ ಪರಿಸರವಾದಿಗಳ ವಿರೋಧ ವ್ಯಕ್ತವಾಗಿ, ಅರ್ಧಕ್ಕೆ ನಿಂತಿತ್ತು. ಈಗ ಸುಪ್ರೀಂಕೋರ್ಟ್ ಆದೇಶದಿಂದ ಯೋಜನೆ ಮತ್ತೆ ಚಿಗುರೊಡೆಯುವ ಸಾಧ್ಯತೆಯಿದೆ.