ಶೋಭಾ ಕರಂದ್ಲಾಜೆ ಸಚಿವ ಸ್ಥಾನಕ್ಕೆ ರಾಜೀನಾಮೆ?

ಏಕೆಂದರೆ, ಮೊನ್ನೆ ಗಡ್ಕರಿ ಅವರು ರಾಜ್ಯಕ್ಕೆ ಬಂದು ಹೋದಾಗಿನಿಂದ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಇದು ನಿಜ ಅನ್ನಿಸುತ್ತದೆ. ಜತೆಗೆ, ಯಡಿಯೂರಪ್ಪನವರ 70ನೇ ಬರ್ತ್ ಡೆ ಗೆ ಗುರುದಕ್ಷಿಣೆಯಾಗಿ ಶೋಭಾ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಬಿಜೆಪಿ ಮೂಲಗಳೂ ಪಿಸುಗುಟ್ಟುತ್ತಿವೆ.
'ಅವರಿಗಿಲ್ಲದ ಸ್ಥಾನಮಾನ ನನಗೇಕೆ?': ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿ ಖುರ್ಚಿ ಅಲಂಕರಿಸುವುದನ್ನು ಮತ್ತೊಮ್ಮೆ ಕಣ್ತುಂಬ ನೋಡಬೇಕೆಂದು ಬಯಸಿರುವ ಶೋಭಾ ಮೇಡಂ, ಕಳೆದ ವಾರ ಶಿವರಾತ್ರಿ ಸಂದರ್ಭದಲ್ಲಿ ಸದಾನಂದ ಗೌಡರನ್ನು ಹೇಗಾದರೂ ಮಾಡಿ ಕೆಳಗಿಳಿಸಿ ಎಂದು ದಿಲ್ಲಿಯಲ್ಲಿ ಯಡ್ಡಿ ಪರ ವಕಾಲತ್ತು ವಹಿಸಿದ್ದು ಜಗತ್ತಿಗೇ ತಿಳಿದ ವಿಷಯ.
ತಮ್ಮ ಕಡೆಯವರಾದ ಸದಾನಂದ ಗೌಡರ ಬಗ್ಗೆ ಶೋಭಾ ಮೇಡಂ ಸಹಜವಾಗಿಯೇ ಮುನಿಸುಕೊಂಡಿದ್ದರು. ಯಡಿಯೂರಪ್ಪನವರನ್ನು ವ್ಯವಸ್ಥಿತವಾಗಿ ದೂರ ಮಾಡುವುದರ ಜತೆ ಜತೆಗೆ ಅವರ ಪಟಾಲಂ ಅನ್ನೂ ದೂರವಿಡತೊಡಗಿದ ಸದಾನಂದರು ಕೊನೆಗೆ ಶೋಭಾರನ್ನೂ ಕೇರ್ ಮಾಡಿಲ್ಲ. ಒಮ್ಮೆ ತುಂಬು ಸಭೆಯಲ್ಲೇ 'ಸಿಎಂ ನೀವಾ, ನಾನಾ?' ಎಂದು ಗದರಿಕೊಂಡಿದ್ದರು. ಪರಿಸ್ಥಿತಿ ಕೈಮೀರಿದೆ ಎಂಬುದನ್ನು ಅರಿತ ಶೋಭಾ 'ಸರಿ ಸುಮ್ನಿರಿ. ಮೀಡಿಯಾ ನೋಡ್ತಿದೆ' ಎಂದಾಗಲೂ ಸದಾನಂದರು 'ಬರೀಲೀ ಬಿಡ್ರಿ. ನಿಮ್ಮೊಳಗಿನ ಹುಳುಕೆಲ್ಲ ಬಯಲಿಗೆ ಬರಲಿ' ಎಂದು ಆವಾಜ್ ಹಾಕಿದ್ದರು.
ಇದರಿಂದ ಒಳಗೊಳಗೇ ತೀವ್ರವಾಗಿ ಕುದ್ದು ಹೋದ ಶೋಭಾ ಇಂದಲ್ಲ ನಾಳೆ ಯಜಮಾನ್ ಯಡಿಯೂರಪ್ನೋರು ಮತ್ತೆ ಸಿಎಂ ಆಗ್ತಾರೆ ಅಂತ ಸಮಾಧಾನ ಮಾಡಿಕೊಂಡಿದ್ದರು. ಆದರೂ ಯಡಿಯೂರಪ್ನೋರ ತಿದಿ ಒತ್ತುತ್ತಲೇ ಇದ್ದರು. ಹೇಗಾದರೂ ಮಾಡಿ ಆ ಸದಾನಂದನನ್ನು ಕೆಳಗಿಳಿಸಿ ಎಂದು ಗೋಳು ತೋಡಿಕೊಳ್ತಿದ್ದರು. ಆದರೆ ಮೊನ್ನೆ ರೆಸಾರ್ಟಿನಲ್ಲಿ ಗಡ್ಕರಿ ಕೊಟ್ಟ ಏಟಿಗೆ ಅದೆಲ್ಲ ಇನ್ನು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಂತೆ 'ಅವರಿಗಿಲ್ಲದ ಸ್ಥಾನಮಾನ ನನಗೇಕೆ?' ಎಂದು ಎಣಿಸಿದ ಶೋಭಾ ರಾಜೀನಾಮೆ ನೀಡುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.
ಮುಂದೆ ಎಲೆಕ್ಷನಿಗೂ ನಿಲ್ಲೊಲ್ಲ ಶೋಭಾ: ಇದ್ಯಾಕೋ ಸರಿಹೋಗ್ತಿಲ್ಲ ಎಂದೆಣೆಸಿದ ಶೋಭಾ ಮೇಡಂ ಮೊನ್ನೆ ವಿ ಎಸ್ ಆಚಾರ್ಯರ ಅಂತ್ಯಸಂಸ್ಕಾರ ಮುಗಿಸಿಕೊಂಡು ವಾಪಸು ಬರುವಾಗ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರ ಬಳಿ ಅತ್ತಂತೆ ಮಾಡಿದ್ದರು. - ಯಾಕೋ ಏನೋ ಸರಕಾರ ಈ ಸರಕಾರ ನೆಟ್ಟಗೆ ನಡೀತಿಲ್ಲ ಸಾರ್. ಇದೇ ಪರಿಸ್ಥಿತಿ ಮುಂದುವರಿದರೆ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬೇಕಾದ್ರೆ ಈಗ್ಲೇ ರಾಜೀನಾಮೆ ಕೊಟ್ಟು ಹೋಗುವೆ ಎಂದು ಅಲವತ್ತುಕೊಂಡಿದ್ದರು. ಶೋಭಕ್ಕ ಇನ್ನು ಎಲೆಕ್ಷನ್ ಗೇ ನಿಲ್ಲೊಲ್ಲ ಎಂದಿದ್ದನ್ನು ಈಶ್ವರಪ್ಪನವರಿಗೆ ಆಶ್ಚರ್ಯವಾದರೂ ಅವರು ಯಾವುದೇ ಭರವಸೆ ನೀಡದೆ ತೆಪ್ಪಗಾಗಿದ್ದಾರೆ.












Click it and Unblock the Notifications