ಕೃಷ್ಣಯ್ಯ ಶೆಟ್ಟರಿಂದ ಗಂಗಾಜಲ ವಿತರಣೆ ಆರಂಭ
ಭಾನುವಾರ ಬೆಳಗ್ಗೆ ಸುಮಾರು 11 ಗಂಟೆಯಲ್ಲಿ ಚಾಮರಾಜಪೇಟೆಯ ಬಿ.ಕೆ. ಮರಿಯಪ್ಪ ಹಾಸ್ಟೆಲ್ ಎದುರು ಇರುವ ರಾಮೇಶ್ವರ ದೇವಸ್ಥಾನದಲ್ಲಿ ಪೂರ್ಣಕುಂಭ ಮೇಳದೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಸಾಂಕೇತಿಕವಾಗಿ ವಿತರಿಸಿದರು.
ಮುಜರಾಯಿ ವ್ಯಾಪ್ತಿಗೆ ಬರುವ ರಾಜ್ಯದ 3 ಸಾವಿರ ಪುರಾತನ ಶಿವಾಲಯಗಳು ಹಾಗೂ 2 ಸಾವಿರ ಖಾಸಗಿ ದೇವಸ್ಥಾನಗಳಿಗೆ ತಲಾ 10 ರಿಂದ 50 ಲೀಟರ್ ಗಂಗಾಜಲ ವಿತರಿಸಲಾಗುವುದು ಎಂದು ಕೃಷ್ಣಯ್ಯ ಶೆಟ್ಟರು ಈ ಸಂದರ್ಭದಲ್ಲಿ ಹೇಳಿದರು.
ಹರಿದ್ವಾರದ ಸಮೀಪ ಬ್ರಹ್ಮಕುಂಡದಿಂದ ಟ್ಯಾಂಕರ್ಗಳ ಮೂಲಕ ಈ ಗಂಗಾಜಲ ತರಿಸಲಾಗಿದ್ದು, ಸೋಮವಾರ ನಡೆಯುವ ಮಹಾ ಶಿವರಾತ್ರಿ ಹಬ್ಬದಂದು ಭಕ್ತಾದಿಗಳಿಗೆ ತಲುಪಿಸಲಾಗುವುದು. ಪ್ರತಿ ಜಿಲ್ಲೆಗೆ ಪ್ರತ್ಯೇಕ ವಾಹನಗಳ ಮೂಲಕ ಕ್ಯಾನ್ಗಳಲ್ಲಿ ಗಂಗಾಜಲ ರವಾನಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಕೃಷ್ಣಯ್ಯ ಶೆಟ್ಟಿ ತಿಳಿಸಿದರು.
ಮುಜರಾಯಿ ಇಲಾಖೆ ಸಚಿವನಾಗಿದ್ದಾಗ ವೈಕುಂಠ ಏಕಾದಶಿಗೆ ತಿರುಪತಿ ಲಡ್ಡು ಹಾಗೂ ಮಹಾಶಿವರಾತ್ರಿ ಹಬ್ಬಕ್ಕೆ ಭಕ್ತಾದಿಗಳಿಗೆ ಗಂಗಾಜಲ ವಿತರಿಸುವ ಮೂಲಕ 'ದೇವರ ಸೇವೆ' ಮಾಡುವ ನಿರ್ಧಾರ ಕೈಗೊಂಡಿದ್ದೆ. ಅದರಂತೆ ಸತತ ಮೂರು ವರ್ಷಗಳಿಂದ ಈ ಕೆಲಸ ಮುಂದುವರೆಸಿದ್ದೇನೆ. ಇದರ ಸಂಪೂರ್ಣ ಖರ್ಚು- ವೆಚ್ಚವನ್ನು ತಮ್ಮ ಕುಟುಂಬ ಭರಿಸಲಿದ್ದು, ಮುಜರಾಯಿ ಇಲಾಖೆ ಸಹಕಾರ ನೀಡುತ್ತದೆ ಎಂದು ಹೇಳಿದರು.