ನೀರಿನ ಬರ ನೀಗಿಸಲು 100 ಕೋಟಿ ರು ಘೋಷಣೆ

ಸಚಿವ ಆರ್ ಅಶೋಕ್, ಸುರೇಶ್ ಕುಮಾರ್ ಸೇರಿದಂತೆ ಬೆಂಗಳೂರಿನ ವಿಧಾನಸಭಾ ಸದಸ್ಯರೊಡನೆ ಮಾತುಕತೆ ನಡೆಸಿದ ನಂತರ ಸಿಎಂ ಸದಾನಂದ ಗೌಡರು ಈ ನಿರ್ಣಯ ಪ್ರಕಟಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಗೆ ಹೊಸ ಬಡಾವಣೆಗಳನ್ನು ಸೇರ್ಪಡೆ ಮಾಡಿರುವುದರಿಂದ ಅಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಕಾವೇರಿ ನೀರು ಸರಬರಾಜು ಯೋಜನೆ(CWSS) 4ನೇ ಹಂತ ಎರಡನೇ ಘಟ್ಟ ಮಾರ್ಚ್ 2012ರ ವೇಳೆಗೆ ಮುಕ್ತಾಯವಾಗಬೇಕಿತ್ತು. ಬಿಬಿಎಂಪಿಯ ಹೊಸ ಬಡಾವಣೆಗಳಿಗೆ ಈ ನೀರು ಸರಬರಾಜು ಮಾಡುವ ಉದ್ದೇಶ ಹೊಂದಲಾಗಿತ್ತು.
ಆದರೆ, ಕಾವೇರಿ ನೀರು ಸರಬರಾಜು ವಿಳಂಬವಾಗಲಿದೆ ಎಂದು ಜಲ ಮಂಡಳಿ ತಿಳಿಸಿದೆ. ಹೊಸ ಬಡಾವಣೆಗಳಲ್ಲಿ ಬೋರ್ ವೆಲ್ ಕೊರೆಯುವುದು, ಹಳೆ ಬೋರ್ ವೆಲ್ ದುರಸ್ತಿ, ಟ್ಯಾಂಕರ್ ಮೂಲಕ ನೀರು ಪೂರೈಕೆ ಸೇರಿದಂತೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಕಾವೇರಿ ನೀರು ಬೆಂಗಳೂರಿನ ಬಡಾವಣೆಗಳಿಗೆ ಹರಿಯುವ ತನಕ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ತಗಲುವ ವೆಚ್ಚದ ಬಗ್ಗೆ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ತಕ್ಷಣವೇ 100 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಸದಾನಂದ ಗೌಡ ತಿಳಿಸಿದ್ದಾರೆ.
ಸುಮಾರು 26 ಲಕ್ಷ ಬೆಂಗಳೂರಿಗರು ಕುಡಿಯುವ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಲಿದೆ. ಮಾರ್ಚ್ ತಿಂಗಳ ಅಂತ್ಯಕ್ಕೆ ನಗರಕ್ಕೆ ಬರಬೇಕಿದ್ದ ಕಾವೇರಿ ನೀರು ಗಲ್ಲಿಗಳ ನಲ್ಲಿಗಳಲ್ಲಿ ಬರುವುದಿಲ್ಲ ಎಂದು ಜಲಮಂಡಳಿ ಇತ್ತೀಚೆಗೆ ಎಚ್ಚರಿಸಿತ್ತು.












Click it and Unblock the Notifications