ರೆಡ್ಡಿ ಹೆಲಿಕಾಪ್ಟರ್, ಕಾರು ವಾಪಸಿಗೆ ಸಿಬಿಐ ಬ್ರೇಕ್

'ಹೆಲಿಕಾಪ್ಟರ್, ಐಷಾರಾಮಿ ಕಾರುಗಳನ್ನು ಬಳಸದಿದ್ದರೆ ಅವು ತುಕ್ಕು ಹಿಡಿಯುತ್ತವೆ ಎಂಬ ರೆಡ್ಡಿ ವಾದದಲ್ಲಿ ಹುರುಳಿಲ್ಲ. ಅವುಗಳನ್ನೆಲ್ಲ ಸುಸ್ಥಿತಿಯಲ್ಲಿಡಲಾಗಿದೆ. ಹೆಲಿಕಾಪ್ಟರ್ ಬೆಂಗಳೂರಿನಲ್ಲೂ, ಕಾರುಗಳು ಬಳ್ಳಾರಿಯಲ್ಲಿ ಸುಭದ್ರವಾಗಿವೆ. ರೆಡ್ಡಿಗೆ ಯಾವುದೇ ಆತಂಕ ಬೇಡ' ಎಂದು ಸಿಬಿಐ ನ್ಯಾಯಾಲಯದ ಗಮನ ಸೆಳೆದಿದೆ.
'ಅದಕ್ಕಿಂತ ಮುಖ್ಯವಾಗಿ ಈ ವಾಹನಗಳನ್ನು ವಾಪಾಸು ಮಾಡುತ್ತಿದ್ದಂತೆ ರೆಡ್ಡಿ ಅದನ್ನು ಮಾರಿಬಿಡುವ ಸಾಧ್ಯತೆ ಇದೆ. ಒಂದು ವೇಳೆ ಅವು ಮಾರಾಟಗೊಂಡರೆ ಮುಂದಿನ ವಿಚಾರಣೆ ಹಂತಗಳಲ್ಲಿ ಖರೀದಿದಾರರನ್ನೂ ಮೂರನೇ ಪಾರ್ಟಿಯನ್ನಾಗಿ ಮಾಡಬೇಕಾಗುತ್ತದೆ. ಅದು ರಗಳೆಯಾಗುತ್ತದೆ' ಎಂದು ಸಿಬಿಐ ಬ್ರೇಕ್ ಹಾಕಿದೆ.
ಗಮನಾರ್ಹವೆಂದರೆ 'ಆರ್ಥಿಕ ಭಯೋತ್ಪಾದಕ' ಜನಾರ್ದನ ರೆಡ್ಡಿ ಇವುಗಳನ್ನೆಲ್ಲ ಖರೀಸಿದ್ದು ಅಕ್ರಮ ಗಣಿಗಾರಿಕೆಯಿಂದ ಹರಿದುಬಂದ ಹಣದಿಂದ. ಅಷ್ಟಕ್ಕೂ ಹೆಲಿಕಾಪ್ಟರ್ ಓಬಳಾಪುರಂ ಮೈನಿಂಗ್ ಕಂಪನಿಯ ಹೆಸರಿನಲ್ಲಿರುವುದು. ಇನ್ನು ಒಂದು ಕಾರಂತೂ ಇನ್ನೂ ನೋಂದಣಿಯೂ ಆಗಿಲ್ಲ' ಎಂದು ರೆಡ್ಡಿ ಅರ್ಜಿಯನ್ನು ವಿರೋಧಿಸಿ ಸಿಬಿಐ ವಾದ ಮಂಡಿಸಿದೆ.
ಹೀಗೆ ಅಕ್ರಮ ಗಣಿಗಾರಿಕೆಯಿಂದ ಹರಿದುಬಂದ ಹಣದಿಂದ ಖರೀದಿಸಲಾಗಿದೆ. ತಾನು ದಾಖಲಿಸಿರುವ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದ ಮುಖ್ಯ ವಿಚಾರವೇ ಈ ಹಣ. ಆದ್ದರಿಂದ ಕೇಸು ಮುಗಿಯುವವರೆಗೂ ವಾಹನಗಳನ್ನು ವಾಪಸು ಮಾಡಬಾರದು ಎಂದು ಸಿಬಿಐ ಬಲವಾಗಿ ಸಮರ್ಥಿಸಿಕೊಂಡಿತು. ವಿಚಾರಣೆಯನ್ನು ಫೆ. 22ಕ್ಕೆ ಮುಂದೂಡಲಾಗಿದೆ.












Click it and Unblock the Notifications