ಸಿಎಂ ಸ್ಥಾನ ಎಷ್ಟು ಕಾಲ, ಯಾವನಿಗೊತ್ತು?: ಡಿವಿಎಸ್
ಗುರುವಾರ(ಫೆ.9) ವಿಧಾನ ಪರಿಷತ್ತಿನ ಸಹದ್ಯೋಗಿಗಳು ನೀಡಿದ ಆತ್ಮೀಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಸದಾನಂದ ಗೌಡ, 'ನಾನು ಎಷ್ಟು ಕಾಲ ಸಿಎಂ ಸ್ಥಾನದಲ್ಲಿ ಮುಂದುವರೆಯುತ್ತೇನೋ ಗೊತ್ತಿಲ್ಲ. ಆದರೆ, ಇರುವಷ್ಟು ಕಾಲ ಜನರು ದುಃಖ ಮರೆತು ನಲಿಯುವಂತೆ ಮಾಡುತ್ತೇನೆ' ಎಂದರು.
ಪರಿಷತ್ತಿ ಎಲ್ಲಾ ಪಕ್ಷದ ಸದಸ್ಯರು ಸದಾನಂದ ಗೌಡರ ಮಾತಿಗೆ ತಲೆದೂಗಿ, ನೀವೆ ಮುಖ್ಯಮಂತ್ರಿಯಾಗಿ ಮುಂದುವರೆಯಿರಿ ಎಂದು ಹಾರೈಸಿದರು.
'ಪ್ರತಿಕ್ಷಣ ಸಂಕಷ್ಟಗಳು ಎದುರಾಗುತ್ತಿದೆ. ಆದರೆ, ಅದನ್ನು ಅವಕಾಶ ರೂಪದಲ್ಲಿ ಬಳಸಿಕೊಂಡು ತಮ್ಮ ಸ್ವಾರ್ಥಕ್ಕಾಗಿ ಜನರ ದಿಕ್ಕು ತಪ್ಪಿಸುತ್ತಿರುವವರ ಮೇಲೆ ಕನಿಕರವಿದೆ. ಇತೀಚಿನ ರಾಜಕೀಯ ಬೆಳವಣಿಗೆಯಿಂದ ಮನಸ್ಸಿಗೆ ನೋವಾಗಿದೆ' ಎಂದು ಸದಾನಂದ ಹೇಳಿದರು.
ನಾನು ಸಿಎಂ ಹುದ್ದೆಗಾಗಿ ಆಸೆ ಪಟ್ಟವನಲ್ಲ. ತಾನಾಗಿ ಒದಗಿ ಬಂದದ್ದು ನನ್ನ ಸುಕೃತ. ನಾನು ಪಟ್ಟ ಉಳಿಸಿಕೊಳ್ಳಲು ಲಾಬಿ ಮಾಡುವ ಪೈಕಿಯಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪ ಅವರನ್ನು ಚುಚ್ಚಿದರು.
ಜನ ಸಾಮಾನ್ಯರ ದೈನಂದಿನ ಬದುಕನ್ನು ಹಸನುಗೊಳಿಸುವುದು ನನ್ನ ಮುಖ್ಯ ಆದ್ಯತೆ ಎಂದು ಸಿಎಂ ಸದಾನಂದ ಸ್ಪಷ್ಟಪಡಿಸಿದರು.