ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವರ ತುಂಟತನ: ಬರಿಗಾಲ ದಾಸನಾದ ಮುಖ್ಯಮಂತ್ರಿ

By Srinath
|
Google Oneindia Kannada News

karnataka-cm-sadananda-gowda-misses-his-slippers
ತಿಪಟೂರು, ಫೆ.9: ಬರಿಗೈ ದಾಸ ಗೊತ್ತು. ಆದರೆ ಇದ್ಯಾರು ಬರಿಗಾಲ ದಾಸ ಎನ್ನುತ್ತಿದ್ದೀರಾ? ಅದೆ ಸ್ವಾಮಿ ನಮ್ಮ ಸಿಎಮ್ಮು ಡಿವಿ ಸದಾನಂದಗೌಡರು. ಯಾವ ಪ್ರಾಯಃಶ್ಚಿತ್ತವಾಗಿ ಇಂತಹ ವ್ರತ ಎನ್ನುತ್ತಿದ್ದೀರಾ?

ಅವರೇನೂ ಅಂತಹ ಪಾಪದ ಕೆಲಸ ಮಾಡಿಲ್ಲ. ಆದರೆ ತಮ್ಮ ಸಚಿವ ಸಹೋದ್ಯೋಗಿಗಳ ಪೋಲಿತನದ ಸುಳಿವು ಸಿಕ್ಕಿ ಸದಾನಂದರು ಹೈರಾಣಗೊಂಡಿದ್ದರು ಎನಿಸುತ್ತದೆ. ಪಟ್ಟಣಕ್ಕೆ ಮಂಗಳವಾರ ರಾತ್ರಿ ಭೇಟಿ ನೀಡಿದ್ದ ಮುಖ್ಯಮಂತ್ರಿ ಡಿವಿ ಸದಾನಂದಗೌಡರು ಚಪ್ಪಲಿ ಇಲ್ಲದೆ ಬರಿಗಾಲಿನಲ್ಲಿ ಕಾರನ್ನೇರಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ಘಟನೆ ನಡೆದಿದೆ.

ಏನಾಯಿತೆಂದರೆ... ಪ್ರಸಿದ್ಧ ತರಳಬಾಳು ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮಕ್ಕಾಗಿ ಮುಖ್ಯಮಂತ್ರಿ ಕಡೂರಿಗೆ ತೆರಳಿದ್ದರು. ಬೆಂಗಳೂರಿಗೆ ವಾಪಸಾಗುವ ಮಾರ್ಗದಲ್ಲಿ ರಾತ್ರಿ ಊಟಕ್ಕೆಂದು ತಿಪಟೂರು ಶಾಸಕ ಬಿಸಿ ನಾಗೇಶ್‌ ಮನೆಗೆ ಭೇಟಿ ನೀಡಿದ್ದರು. ರಾತ್ರಿ ಸುಮಾರು 9.45ರಲ್ಲಿ ಶಾಸಕ ನಾಗೇಶ್‌ ಮನೆಗೆ ಅವರು ಹೋದಾಗ ಸಚಿವರುಗಳಾದ ಸುರೇಶ್‌ ಕುಮಾರ್‌, ಬಸವರಾಜ ಬೊಮ್ಮಾಯಿ, ಶಾಸಕ ಸಿಟಿ ರವಿ ಸಾಥ್ ನೀಡಿದ್ದರು.

ಮಲ್ಪೆ ಬೀಚಿನಲ್ಲಿ ವಿದೇಶಿಯರ ಬೆತ್ತಲೆ ಕುಣಿತ ಹಗರಣ ಹಾಗೂ ಮಂಗಳವಾರ ಕೆಳಮನೆ ಕಲಾಪ ವೇಳೆ ಅಶ್ಲೀಲ ಚಿತ್ರ ನೋಡುವಾಗ ಮಾಧ್ಯಮಗಳ ಕೈಗೆ ಸಿಕ್ಕಿಬಿದ್ದು ಇಡೀ ನಾಡು ಅದನ್ನು ವೀಕ್ಷಿಸುತ್ತಿರುವ ಅಹಿತಕರ ಪ್ರಸಂಗಗಳು ಅವರನ್ನು ಬಾಧಿಸಿದಂತಿತ್ತು.

ಕಡೂರಿನಲ್ಲೇ ಅದಲುಬದಲು: ಶಾಸಕರ ಮನೆಯ ಪ್ರವೇಶ ದ್ವಾರದಲ್ಲಿಯೇ ತಡೆದ ಮಾಧ್ಯಮದವರು, ಮುಖ್ಯಮಂತ್ರಿಗಳ 'ಬ್ಲೂ ಬಾಯ್ಸ್' ಬಗ್ಗೆ ಪ್ರಶ್ನೆ ಕೇಳಿದಾಗ ಸದಾನಂದರು ಬೇಸರದ ನೋಟ ಬೀರಿದ್ದರು. ಹಗರಣದ ಪೂರ್ಣ ಮಾಹಿತಿ ತಮಗೆ ಇನ್ನು ಲಭ್ಯವಾಗಿಲ್ಲ. ಬೆಂಗಳೂರಿಗೆ ಹೋಗಿ, ಎಲ್ಲವನ್ನು ಪರಿಶೀಲಿಸಿದ ನಂತರವಷ್ಟೇ ಪ್ರತಿಕ್ರಿಯೆ ನೀಡಲು ಸಾಧ್ಯ ಎಂದು ಹೇಳುತ್ತಲೆ ಶಾಸಕರ ಮನೆಯ ಊಟದ ಕೋಣೆ ಸೇರಿಕೊಂಡುಬಿಟ್ಟರು.

ಊಟದ ನಂತರ ಸ್ವಲ್ಪನಿರಾಳರಾದಂತೆ ಕಂಡ ಮುಖ್ಯಮಂತ್ರಿ, ಹೊರಡಲು ಅನುವಾಗಿ ಚಪ್ಪಲಿ ಮೆಟ್ಟಲು ಮುಂದಾದಾಗ ಅವರು ಜೋಲಿ ಹೊಡೆದರು. ಶಾಸಕರ ಮನೆಯ ವರಂಡಾದಲ್ಲಿ ಮುಖ್ಯಮಂತ್ರಿ ಮತ್ತು ಸಚಿವ ಬಸವರಾಜ ಬೊಮ್ಮಾಯಿ ಇಬ್ಬರು ಮಾತ್ರ ಚಪ್ಪಲಿ ಬಿಟ್ಟು ಮನೆಯ ಒಳ ಹೋಗಿದ್ದರು. ವಾಪಸಾಗುವಾಗ ಬೊಮ್ಮಾಯಿ ತಮ್ಮ ಚಪ್ಪಲಿ ಮೆಟ್ಟಿ ಹೊರ ಹೋದ ನಂತರ ಅಲ್ಲಿ ಬಲಗಾಲಿನವೇ ಎರಡು ಚಪ್ಪಲಿಗಳಿದ್ದವು! ಬಹುಶಃ ಬೊಮ್ಮಾಯಿ ಚಪ್ಪಲಿ ಅದಲುಬದಲು ಆಗಿರಬೇಕೆಂದುಕೊಂಡು ಬೊಮ್ಮಾಯಿಯನ್ನು ಕರೆದು ಕೇಳಿದಾಗ ಅವರ ಕಾಲಿನ ಚಪ್ಪಲಿಗಳು ಸರಿ ಇದ್ದವು.

ಮುಖ್ಯಮಂತ್ರಿಗಳು ಕಡೂರಿನ ಕಾರ್ಯಕ್ರಮದಿಂದ ಹೊರಟಾಗಲೇ ಈ ಪೊರಪಾಟು ನಡೆದಿತ್ತು. ಹಗರಣಗಳ ತಲೆಬಿಸಿಯಿಂದಾಗಿ ತಿಪಟೂರಿಗೆ ಬಂದು ಊಟ ಮುಗಿಸಿ ಹೊರಟಾಗಲೇ ಅವರ ಗಮನ ಚಪ್ಪಲಿ ಬದಲಾಗಿರುವ ಕಡೆ ಹರಿದಿದ್ದು. ಕೊನೆಗೆ ಆ ಚಪ್ಪಲಿಗಳನ್ನು ಶಾಸಕರ ಮನೆಯ ಬಾಗಿಲಿನಲ್ಲಿಯೇ ಬಿಟ್ಟ ಮುಖ್ಯಮಂತ್ರಿಗಳು, ಬರಿಗಾಲಿನಲ್ಲಿಯೇ ಕಾರು ಏರಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

English summary
Karnataka CM Sadananda Gowda missed his slippers on his way back to Bangalore on Tuesday night (Feb 7) when the whole Karnataka was watching the infamous video clippings of his 'blue boys'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X