ನ್ಯಾ ಸುಧೀಂದ್ರರಾವ್ ಟೀಕಿಸಿದ್ದ ಚಂದ್ರೇಗೌಡರಿಗೆ ನೋಟಿಸ್
ಇವರ ಹೇಳಿಕೆಯನ್ನು ಪ್ರಕಟಿಸಿರುವ ಕನ್ನಡ ಪ್ರಭ ದಿನಪತ್ರಿಕೆಯ ವಿರುದ್ಧವೂ ಮೊಕದ್ದಮೆ ದಾಖಲಾಗಿದೆ. ಇಬ್ಬರಿಗೂ ನೋಟಿಸ್ ನೀಡುವಂತೆ ನ್ಯಾಯಮೂರ್ತಿ ಮೋಹನ ಶಾಂತನಗೌಡರ್ ಆದೇಶಿಸಿದ್ದಾರೆ. ಫೆಬ್ರವರಿ 21 ರೊಳಗಾಗಿ ಉತ್ತರ ನೀಡಬೇಕಾಗಿದೆ.
ಭೂಹಗರಣ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಜಾಮೀನು ನೀಡಲು ನ್ಯಾ ಸುಧೀಂದ್ರರಾವ್ ನಿರಾಕರಿಸಿದ್ದರು. ಆ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಚಂದ್ರೇಗೌಡರು ನ್ಯಾ ಸುಧೀಂದ್ರರಾವ್ ವಿರುದ್ಧ ಹೇಳಿಕೆ ನೀಡಿದ್ದರು.
'ಇದು ನ್ಯಾಯಾಂಗ ನಿಂದನೆ ಆಗುತ್ತದೆಯಲ್ಲವೇ?' ಎಂದು ಪತ್ರಕರ್ತರೊಬ್ಬರು ಎಚ್ಚರಿಸುವ ದನಿಯಲ್ಲಿ ಗೌಡರನ್ನು ಪ್ರಶ್ನಿಸಿದ್ದರು. ಅದಕ್ಕೆ ಸನ್ಮಾನ್ಯ ಚಂದ್ರೇಗೌಡರು 'ನಾನು ಕೂಡ ಕಾನೂನು ಇಲಾಖೆಯ ಮಾಜಿ ಸಚಿವ. ಏನು ಹೇಳಬೇಕು ಎಂಬುದು ನನಗೆ ಗೊತ್ತಿದೆ. ಏನೇ ಬಂದರೂ ಅದನ್ನು ಎದುರಿಸಲು ಸಿದ್ಧ' ಎಂದಿದ್ದರು.
ತಮ್ಮ ವಿರುದ್ಧ ಈ ರೀತಿ ಹೇಳಿಕೆ ನೀಡುವ ಮೂಲಕ ನ್ಯಾಯಾಂಗದ ಘನತೆಗೆ ಚಂದ್ರೇಗೌಡ ಅವರು ಚ್ಯುತಿ ಉಂಟುಮಾಡಿದ್ದಾರೆ. ತಮ್ಮ ವಿರುದ್ಧ ವೃಥಾ ಆರೋಪ ಮಾಡಿದ್ದಾರೆ, ಇದು ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ನ್ಯಾ ಸುಧೀಂದ್ರರಾವ್ ಅವರು ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಪತ್ರ ಬರೆದಿದ್ದರು. ಈ ಪತ್ರದ ಆಧಾರದ ಮೇಲೆ ನ್ಯಾಯಾಂಗ ನಿಂದನೆ (ಕ್ರಿಮಿನಲ್) ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.