ವಕೀಲ, ಪೊಲೀಸ್ ಜಟಾಪಟಿಗೆ ಸಾರ್ವಜನಿಕ 'ಬಲಿ'

ತಿಕ್ಕಾಟ ಆರಂಭವಾಗಿ ಆರು ಗಂಟೆ ಕಳೆದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ವಕೀಲರು ಮತ್ತು ಪೊಲೀಸರ ನಡುವಿನ ಸಂಧಾನ ಸಂಪೂರ್ಣ ವಿಫಲವಾಗಿದೆ. ಕೆಂಪೆಗೌಡ ರಸ್ತೆಯಲ್ಲಿ ರಸ್ತೆ ಸಂಚಾರ ನಿಂತ ನೀರಾಗಿದೆ. ಜನರು ತಲುಪಬೇಕಾದ ಸ್ಥಳ ತಲುಪಲು ಸಾಧ್ಯವಾಗುತ್ತಿಲ್ಲ. ಬಸ್ಸನ್ನು ತಪ್ಪಿಸಿಕೊಂಡವರೆಷ್ಟೋ, ರೈಲನ್ನು ಹತ್ತಲು ವಿಫಲರಾದವರು ಇನ್ನೆಷ್ಟೋ?
ಲೈಸೆನ್ಸ್ ಇಲ್ಲದ ಕಾರಣಕ್ಕಾಗಿ ಬಾಲಕೃಷ್ಣ ಎಂಬ ಕನ್ನಡ ಸರಿಯಾಗಿ ಮಾತಾಡಲು ಬಾರದ ವಕೀಲನನ್ನು ಪೊಲೀಸರು ಜ.14ರಂದು ಬಂಧಿಸಿದ್ದ ಹಿನ್ನೆಲೆಯಲ್ಲಿ ಈ ಗಲಾಟೆ ಆರಂಭವಾಗಿದೆ. ಬಾಲಕೃಷ್ಣನನ್ನು ಬಾಸುಂಡೆ ಬರುವಂತೆ ತ್ಯಾಗರಾಜನಗರ ಪೊಲೀಸ್ ಪೇದೆ ಅರುಣ್ ಬಾರಿಸಿದ್ದಾನೆ ಎಂಬುದು ವಕೀಲರ ಆರೋಪ. ಆತನನ್ನು ಅಮಾನತು ಮಾಡಲೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ವಕೀಲರು ಪಟ್ಟುಹಿಡಿದಿದ್ದಾರೆ.
ಮೈಸೂರು ಸರ್ಕಲ್ ಸುತ್ತಮುತ್ತ ಭಯಂಕರ ಟ್ರಾಫಿಕ್ ಜಾಮ್ ಉಂಟಾಗಿದ್ದು, ಉದ್ರಿಕ್ತ ವಕೀಲರ ಪ್ರತಿಭಟನೆ ಉಗ್ರವಾಗುತ್ತಿದೆ. ಜ್ಯೋತಿ ಪ್ರಕಾಶ್ ಮಿರ್ಜಿ ಸ್ಥಳಕ್ಕೆ ಆಗಮಿಸಿ ಕೂಡಲೆ ಪರಿಹಾರ ದೊರಕಿಸಿಕೊಡಬೇಕೆಂದು ವಕೀಲರು ಆಗ್ರಹಿಸುತ್ತಿದ್ದಾರೆ. ರಚ್ಚೆ ಹಿಡಿದಿರುವ ವಕೀಲರನ್ನು ಚೆದುರಿಸಲು ಲಾಠಿ ಚಾರ್ಜ್ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಕಾನೂನನ್ನು ವಕೀಲರನ್ನು ಧಿಕ್ಕರಿಸಿದರೆ ಬಂಧಿಸಲು ಸೂಚನೆ ನೀಡಲಾಗಿದೆ.
ಇವರಿಬ್ಬರ ಜಗಳದಿಂದಾಗಿ ಸಾಕಷ್ಟು ತೊಂದರೆಗೆ ಒಳಗಾಗಿರುವ ಸಾರ್ವಜನಿಕರು ವಕೀಲರು ಮತ್ತು ಪೊಲೀಸರ ದೌರ್ಜನ್ಯದ ವಿರುದ್ಧ ಕೆಂಡಕಾರುತ್ತಿದ್ದಾರೆ. ವಕೀಲರಾಗಿದ್ದಾರೆ ಎನ್ನುವ ಕಾರಣಕ್ಕೆ ಯಾಕಿಷ್ಟು ಗಲಾಟೆ ಎಬ್ಬಿಸಬೇಕು ಎಂದು ಹರೀಶ್ ಎಂಬುವವರು ಪ್ರಶ್ನಿಸಿದ್ದಾರೆ. ಪೊಲೀಸರು ವಕೀಲರನ್ನು ಹೊಡೆಯಲೂಬಾರದು, ವಕೀಲರು ಇಂಥ ಪ್ರತಿಭಟನೆಗೆ ಇಳಿಯಲೂಬಾರದು ಎಂದು ಮತ್ತೊಬ್ಬರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಇದೀಗ ಬಂದ ಸುದ್ದಿ : ವಕೀಲರ ಒತ್ತಡಕ್ಕೆ ಮಣಿದಿರುವ ಪೊಲೀಸ್ ಇಲಾಖೆ ಹಲ್ಲೆ ಮಾಡಿದ ತ್ಯಾಗರಾಜನಗರದ ಪೊಲೀಸ್ ಪೇದೆ ಅರುಣ್ ಅವರನ್ನು ಅಮಾನತು ಮಾಡಿರುವುದಾಗಿ ಹೆಚ್ಚುವರಿ ಆಯುಕ್ತರು ನಿರ್ಧರಿಸಿದ್ದಾರೆ.











Click it and Unblock the Notifications