ಎಲ್ ಪಿಜಿ ಟ್ರಕ್ ಮುಷ್ಕರ: ಗ್ಯಾಸ್ ಸಿಲಿಂಡರಿಗೆ ತತ್ವಾರ
'ಮುಷ್ಕರ ಮುಂದುವರಿದರೆ ಜ.16ರಿಂದ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲೆಡೆ ಗ್ಯಾಸ್ ಕೊರತೆ ಎದುರಾಗಬಹುದು. ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೂ ಮುಷ್ಕರ ಕೈಬಿಡುವುದಿಲ್ಲ. ಇದರಿಂದ ಗ್ರಾಹಕರು ಗ್ಯಾಸ್ ಸಿಲಿಂಡರಿಗೆ ಪರದಾಡುವ ಪರಿಸ್ಥಿತಿ ಬರುವುದು ಖಂಡಿತ' ಎಂದು ಷಣ್ಮುಗಪ್ಪ ತಿಳಿಸಿದ್ದಾರೆ. ಅಂದಹಾಗೆ, ಜಿ.ಆರ್. ಷಣ್ಮುಗಪ್ಪ ಅಚರು ದಕ್ಷಿಣ ಭಾರತ ಮೋಟಾರ್ ಮತ್ತು ಟ್ರಾನ್ಸ್ಪೋರ್ಟ್ ವೆಲ್ಫೇರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಈಗಾಗಲೇ ಅಡುಗೆ ಅನಿಲ ಸಾಗಿಸುವ 4000 ಲಾರಿಗಳ ಮಾಲಿಕರು ತಮಿಳುನಾಡಿನಲ್ಲಿ ಗುರುವಾರ ಮಧ್ಯರಾತ್ರಿಯಿಂದ ಅನಿರ್ದಿಷ್ಟ ಮುಷ್ಕರ ಆರಂಭಿಸಿದ್ದಾರೆ. ಮುಷ್ಕರಕ್ಕೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳೂ ಕೈ ಜೋಡಿಸಿರುವುದರಿಂದ ಕರ್ನಾಟಕ, ತಮಿಳುನಾಡು, ಕೇರಳದಲ್ಲೂ ಅಡುಗೆ ಅನಿಲ ಪೂರೈಕೆಗೆ ತೊಂದರೆಯಾಗಲಿದೆ.
ತೈಲ ಕಂಪನಿಗಳ ಜತೆ ಈಗಾಗಲೇ ಟ್ಯಾಂಕರ್ ಮಾಲಿಕರು ನಡೆಸಿದ ಮಾತುಕತೆ ವಿಫಲಗೊಂಡಿದೆ. ಟೆಂಡರ್ ನವೀಕರಣವೂ ಸೇರಿದಂತೆ ಹಲವು ಬೇಡಿಕೆಗಳನ್ನು ಮಾಲಿಕರು ಮುಂದಿಟ್ಟಿದ್ದಾರೆ. ಸಂಕ್ರಾಂತಿ ಸಮಯದಲ್ಲೇ ಈ ಮುಷ್ಕರ ಆರಂಭಗೊಂಡಿರುವುದು ಹಲವು ಮನೆಗಳಲ್ಲಿ ಎಲ್ಪಿಜಿ ಸಮಸ್ಯೆ ತಂದೊಡ್ಡುವ ಸಾಧ್ಯತೆಯಿದೆ.