ಲೋಕಾಯುಕ್ತರಿಗಾಗಿ ಜನರೇ ಉಪವಾಸ ಕೂಡಲಿ

ಜನ ಲೋಕಪಾಲ ಮಸೂದೆ ಮಂಡನೆಯಾಗಬೇಕೇನೋ ಸರಿ. ಆದರೆ, ಇಲ್ಲಿ ಕರ್ನಾಟಕದಲ್ಲಿ ಭ್ರಷ್ಟಾಚಾರವನ್ನು ಹತ್ತಿಕ್ಕಲು ತೀರ ಅಗತ್ಯವಾಗಿ ಬೇಕಾಗಿರುವ ಲೋಕಾಯುಕ್ತರನ್ನೇ ಇನ್ನೂ ನೇಮಕ ಮಾಡಿಲ್ಲ. ಕುರ್ಚಿ ಖಾಲಿಯಾಗಿ ಎರಡು ತಿಂಗಳಾಗಿವೆ. 'ಲೋಕಾಯುಕ್ತ ಉಳಿಸಿ ಜನಾಧಿಕಾರ ನೀಡಿ' ಎಂಬ ಘೋಷಣೆಯೊಂದಿಗೆ ಅಣ್ಣಾ ಹಜಾರೆ ಕೂಡ ಲೋಕಪಾಲ ನೇಮಕಕ್ಕೆ ಖಂಡಿತ ಒತ್ತಡ ಹೇರಲಿದ್ದಾರೆ.
ಲೋಕಪಾಲರ ಹೆಸರು ಹೇಳಿದ್ದೇವೆ, ಅವರ ಹೆಸರನ್ನು ಅಂಗೀಕಾರ ಮಾಡಬೇಕಾದ ಕರ್ತವ್ಯ ರಾಜ್ಯಪಾಲರದು ಎಂದು ಬಿಜೆಪಿ ನಾಯಕರು ಸುಮ್ಮನೆ ಕೂತಿದ್ದರೆ. ಒಂಚೂರು ಕಳಂಕವಿಲ್ಲದ ಮನುಷ್ಯನನ್ನು ತೋರಿಸಲು ಕ್ಷಣಮಾತ್ರದಲ್ಲಿ ನೇಮಕ ಮಾಡುತ್ತೇನೆ ಎಂದು ಭಾರವನ್ನು ಸರಕಾರದ ಮೇಲೆಯೇ ರಾಜ್ಯಪಾಲರು ಜಾಣತನದಿಂದ ಹಾಕುತ್ತಿದ್ದಾರೆ.
ಇದು ರಾಜಕೀಯ ಎಂಬುದು ಎಲ್ಲರಿಗೂ ತಿಳಿದ ವಿಚಾರ. ನೇಮಕ ಮಾಡಿದರೂ ಅಷ್ಟೇ ಮಾಡದಿದ್ದರೂ ಅಷ್ಟೇ ಇಬ್ಬರಿಗೂ ಅಂತಹ ವ್ಯತ್ಯಾಸವೇನೂ ಆಗುವುದಿಲ್ಲ. ಆದರೆ, ನೇಮಕ ಮಾಡಲೇಬೇಕಾದ ಅಗತ್ಯ ಭ್ರಷ್ಟಾಚಾರವನ್ನು ವಿರೋಧಿಸುವ ಮತ್ತು ಭ್ರಷ್ಟತನ ತಾಂಡವವಾಡುತ್ತಿರುವುದನ್ನು ನೋಡುತ್ತಿರುವ ಸಾಮಾನ್ಯ ಜನತೆಗಿದೆ.
ಪರಿಸ್ಥಿತಿ ಹೀಗಿರುವಾಗ, ಲೋಕಾಯುಕ್ತರನ್ನು ನೇಮಕ ಮಾಡಲೇಬೇಕೆಂದು ಆಗ್ರಹಿಸಿ ನಮ್ಮ ಜನರೇ, ಅಣ್ಣಾ ಹಜಾರೆ ಅವರ ಎದುರಿಗೇ ಏಕೆ ಉಪವಾಸ ಸತ್ಯಾಗ್ರಹಕ್ಕೆ ಕೂಡಬಾರದು? ಅಣ್ಣಾ ಪರವಾಗಿ ಹಿಂದಿಯಲ್ಲಿ ಘೋಷಣೆ ಕೂಗುತ್ತ ನಿರಶನ ಮಾಡುವವರೇ ಲೋಕಾಯುಕ್ತ ನೇಮಕಕ್ಕಾಗಿ ಆಮರಣಾಂತ ಉಪವಾಸಕ್ಕೆ ಕೂಡಲಿ. ಫ್ರೀಡಂ ಪಾರ್ಕಿನಲ್ಲಿರುವ 15 ಸಾವಿರ ಜನರಲ್ಲಿ ಕೆಲವರಾದರೂ ಮುಂದಾಗುವರೆ? ಏನಂತೀರಿ?












Click it and Unblock the Notifications