ಆರೋಪಿಯಿಂದ ಲೋಕಾಯುಕ್ತರ ಶಿಫಾರಸು? ನೋ ಚಾನ್ಸ್!

ಲೋಕಾಯುಕ್ತರ ನೇಮಕಾತಿ ಕುರಿತಂತೆ ತಮ್ಮ ವಿರುದ್ಧ ಬಂದಿರುವ ಟೀಕೆಗಳಿಗೆ ಪ್ರತ್ಯುತ್ತರ ನೀಡಿರುವ ಭಾರದ್ವಾಜ್ ಅವರು, ತಮ್ಮ ವಿರುದ್ಧ ಟೀಕಾಪ್ರಹಾರ ಮಾಡಿರುವವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಚಳಿಗಾಲದ ಅಧಿವೇಶನದಲ್ಲಿ ರಾಜ್ಯಪಾಲರ ವಿರುದ್ಧ ಈಶ್ವರಪ್ಪ ವಿಧಾನಸೌಧದ ಮಾಳಿಗೆ ಕಿತ್ತುಹೋಗುವಂತೆ ವಾಕ್ ಪ್ರಹಾರ ಮಾಡಿದ್ದರು. ಯಡಿಯೂರಪ್ಪ ಕೂಡ, ರಾಜ್ಯಪಾಲರು ನ್ಯಾ. ಬನ್ನೂರುಮಠ ಅವರ ನೇಮಕಾತಿಗೆ ಅಂಕಿತ ಹಾಕಲಿ ಇಲ್ಲದಿದ್ದರೆ ಸ್ಥಾನ ಬಿಟ್ಟು ತೊಲಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸರಕಾರ ಶಿಫಾರಸು ಮಾಡಿರುವ ನ್ಯಾ. ಬನ್ನೂರುಮಠ ಅವರ ವಿರುದ್ಧ ನಾನು ನಿಂತಿಲ್ಲ. ಆದರೆ, ಅವರ ಹೆಸರನ್ನು ಆಡಳಿತ ಪಕ್ಷದವರೇ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದರು.
ರಾಜ್ಯಪಾಲರನ್ನು ಟೀಕಿಸುವುದೇ ಈಶ್ವರಪ್ಪ ಅವರ ಕಸುಬು. ಇದಕ್ಕೆಲ್ಲ ನಾನು ಬಗ್ಗುವವನಲ್ಲ. ಇನ್ನೂ ಆರೋಪಿಗಳಿಂದಲೇ ಶಿಫಾರಸಾಗಿರುವವರು ಆರೋಪಿಗಳಿಗೆ ರಕ್ಷಣೆ ನೀಡುವುದಿಲ್ಲ ಎಂದು ಏನು ಗ್ಯಾರಂಟಿ? ಎಂದು ಪ್ರಶ್ನಿಸಿದ ಭಾರದ್ವಾಜ್ ಅವರು, ಸೂಕ್ತಕಾಲದಲ್ಲಿ ಲೋಕಾಯುಕ್ತರ ನೇಮಕಾತಿ ಮಾಡಲಾಗುವುದು ಎಂದು ನುಡಿದರು.
ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಒಳ್ಳೆಯವರೆ. ಆದರೆ, ಅವರಿಗೆ ಮುಕ್ತವಾಗಿ ಕೆಲಸ ಮಾಡಲು ಅವರ ಪಕ್ಷದವರೇ ಬಿಡುತ್ತಿಲ್ಲ ಎಂದು ಭಾರದ್ವಾಜ್ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.












Click it and Unblock the Notifications