ಪ್ರತಿದಾಳಿ ನಡೆಸದಿರುವುದು ನಪುಂಸಕತ್ವವಲ್ಲ : ಠಾಕ್ರೆ

ಕನ್ನಡ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರ ಸೊಂಟ ಮುರಿಯಬೇಕೆಂದು ಹೇಳಿಕೆ ನೀಡಿದ ನಂತರ ಉಕ್ಕಿಹರಿಯುತ್ತಿರುವ ಕನ್ನಡ-ಮರಾಠಿ ದ್ವೇಷದ ಜ್ವಾಲಾಮುಖಿ ತಣ್ಣಗಾಗುವ ಮೊದಲೇ ಕನ್ನಡಿಗರ ವಿರುದ್ಧ ಸಿಟ್ಟಿನ ಬೂದಿಯನ್ನು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಉಗುಳಿದ್ದಾರೆ.
"ಮರಾಠಿ ವಿರೋಧಿ ಚಟುವಟಿಕೆ ನಡೆಸುತ್ತಿರುವ ಗೂಂಡಾಗಳನ್ನು ಕರ್ನಾಟಕ ಸರಕಾರವೇ ನಿಗ್ರಹಿಸಬೇಕು. ಮತ್ತೆ ಕಿಡಿಹೊತ್ತಲು ಅವಕಾಶ ನೀಡಬಾರದು. ನಾವು ಪ್ರತಿದಾಳಿ ನಡೆಸದೆ ಇರುವುದನ್ನು ನಪುಂಸಕತ್ವ ಎಂದು ಭಾವಿಸಬಾರದು" ಎಂದು ಬಾಳಾ ಠಾಕ್ರೆ ಸಂಪಾದಕೀಯದಲ್ಲಿ ಬರೆದಿದ್ದಾರೆ.
"ನಾವು ತಿರುಗಿಬಿದ್ದರೆ ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಉಳಿಗಾಲವಿಲ್ಲ. ಈ ಸಂಗತಿಯನ್ನು ಮರಾಠಿಗರ ಮೇಲೆ ದಾಳಿ ಮಾಡುತ್ತಿರುವ ಗೂಂಡಾಗಳಿಗೆ ತಿಳಿದಿರಬೇಕು" ಎಂದು ಕನ್ನಡಿಗರಿಗೆ ಎಚ್ಚರಿಕೆ ನೀಡಿದ್ದಾರೆ. "ನನ್ನ ಮೇಲೆ ಬರುತ್ತಿರುವ ಟೀಕೆಗಳನ್ನು ನಾನು ನನಗೆ ನೀಡುತ್ತಿರುವ ಗೌರವವೆಂದೇ ಭಾವಿಸುತ್ತೇನೆ" ಎಂದು ವ್ಯಂಗ್ಯವಾಡಿದ್ದಾರೆ.
ಕನ್ನಡ ಕಲಿಯದ ಮರಾಠಿಗರಿಗೆ ವಿದ್ಯಾಭ್ಯಾಸ ಬೇಕಿದ್ದರೆ ಮಹಾರಾಷ್ಟ್ರಕ್ಕೆ ಹೋಗಲಿ ಎಂದು ಕಂಬಾರರು ನೀಡಿದ್ದ ಹೇಳಿಕೆಗೆ ಪ್ರತಿಯಾಗಿ, ಅವರಿಗೆ ನೀಡಿದ್ದ ಜ್ಞಾನಪೀಠ ಪ್ರಶಸ್ತಿಯನ್ನು ಹಿಂದಕ್ಕೆ ಪಡೆಯಬೇಕು, ಅವರ ಸೊಂಟ ಮುರಿಯಬೇಕು ಎಂದು ಬಾಳಾ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದರು. ಠಾಕ್ರೆ ವಿರುದ್ಧ ಕನ್ನಡ ಚಳವಳಿಗಾರರು ಮತ್ತು ಸಾಮಾಜಿಕ ತಾಣಗಳಲ್ಲಿ ಕನ್ನಡಿಗರು ತಿರುಗಿಬಿದ್ದಿದ್ದರು.












Click it and Unblock the Notifications