ಶ್ರೀರಾಮುಲು ಆತ್ಮವಿಶ್ವಾಸಕ್ಕೆ ನಿಜವಾದ ಕಾರಣವೇನು?

ಪ್ರಚಾರಕ್ಕೆ ಬರದೆ ಆಟವಾಡಿಸುತ್ತಿರುವ ಯಡಿಯೂರಪ್ಪನವರಿಂದಾಗಿ ಬಸವಳಿದಿರುವ ಬಿಜೆಪಿಯ ನಾಯಕತ್ವಕ್ಕೆ ಮತ್ತು ಸಮರ್ಥ ನಾಯಕತ್ವವಿಲ್ಲದೆ ಓಡುವ ಮೊದಲೇ ಸುಸ್ತಾದಂತಿರುವ ಕಾಂಗ್ರೆಸ್ ನಾಯಕರಿಗೆ ಇದು ತಿಳಿದಿರದ ವಿಚಾರವೇನಲ್ಲ.
ಪಕ್ಷೇತರನಾಗಿ ಕಣದಲ್ಲಿಳಿದಿರುವ ಬಳ್ಳಾರಿ ಸಹೋದರರ ಆಪ್ತಬಂಟ ಶ್ರೀರಾಮುಲು ಆತ್ಮವಿಶ್ವಾಸದಿಂದ ಬೀಗುತ್ತಿರುವುದಕ್ಕೆ ಇದೇ ಕಾರಣ. ಜನಾರ್ದನ ರೆಡ್ಡಿಯಿಂದ ಆಶೀರ್ವಾದ ಪಡೆದು ಬಂದಿರುವ ಶ್ರೀರಾಮುಲು ಬಿಜೆಪಿ ವಿರುದ್ಧವೇ ತೋಳೇರಿಸಿ ನಿಂತಿರುವುದಕ್ಕೆ ಮೂಲ ಕಾರಣವೇನು?
ಬಲ್ಲ ಮೂಲಗಳ ಪ್ರಕಾರ, ಆಂಧ್ರದ ಚಂಚಲಗುಡ ಜೈಲಿನಿಂದಲೇ ಯಡಿಯೂರಪ್ಪನವರ ಆಶೀರ್ವಾದ ಕೋರಿ ಶ್ರೀರಾಮುಲು ಮುಖಾಂತರ ಪತ್ರ ರವಾನೆಯಾಗಿದೆ. ನೇರವಾಗಿಯಲ್ಲದಿದ್ದರೂ ಪರೋಕ್ಷವಾಗಿಯಾದರೂ ಯಡಿಯೂರಪ್ಪನವರ ಶ್ರೀರಕ್ಷೆ ತಮಗಿದೆ ಎಂಬ ಸಂಗತಿ ಶ್ರೀರಾಮುಲುಗೆ ಮನವರಿಕೆಯಾಗಿದೆ.
ಆದರೆ, ಈ ಉಪ ಚುನಾವಣೆಯಲ್ಲಿ ತಾವು ಗೆದ್ದೇ ಗೆಲ್ಲುತ್ತೇವೆ, ಶ್ರೀರಾಮುಲುಗೆ ಮಣ್ಣು ಮುಕ್ಕೇ ಮುಕ್ಕಿಸುತ್ತೇವೆ ಎಂದು ಈಶ್ವರಪ್ಪ ಮತ್ತು ಸದಾನಂದ ಗೌಡ ಭಾಷಣ ಬಿಗಿಯುತ್ತಿದ್ದಾರೆ. ಹಾಗೆಯೆ, ಯಡಿಯೂರಪ್ಪ ಪ್ರಚಾರಕ್ಕೆ ಬಂದೇ ಬರುತ್ತಾರೆ ಎಂದು ಗೌಡ ವಿಶ್ವಾಸದಿಂದ ನುಡಿಯುತ್ತಿದ್ದಾರೆ.
ಈ ನಡುವೆ, ಬಳ್ಳಾರಿ ಚುನಾವಣಾ ಫಲಿತಾಂಶ ರಾಜ್ಯದ ರಾಜಕಾರಣಕ್ಕೆ ದಿಕ್ಸೂಚಿಯಾಗಲಿದೆ ಎಂದು ಶ್ರೀರಾಮುಲು ಮತದಾರರ ಮುಂದೆ ಹೇಳಿಕೊಳ್ಳುತ್ತಿದ್ದಾರೆ. ರಾಜ್ಯದ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸಲಿದ್ದು, ಮುಂದೆ ಸಮ್ಮಿಶ್ರ ಸರಕಾರ ರಚನೆಯಾಗಿಲಿದೆ ಎಂದು ಕೋಡಿಮಠ ಸ್ವಾಮೀಜಿ ಗದಗದಲ್ಲಿ ಭವಿಷ್ಯ ನುಡಿದಿದ್ದಾರೆ.












Click it and Unblock the Notifications