ಕೈಕೊಟ್ಟ ಬಳ್ಳಾರಿ ಶಾಸಕರ ವಿರುದ್ಧ ಕ್ರಮವಿಲ್ಲ : ಈಶ್ವರಪ್ಪ

ಶ್ರೀರಾಮುಲು ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾಗಿದ್ದ ಕ್ಷೇತ್ರಕ್ಕೆ ನ.30ರಂದು ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು (ನ.11) ಕೊನೆಯ ದಿನವಾಗಿತ್ತು. ಬಿಜೆಪಿ ನಾಯಕರನ್ನು ಧಿಕ್ಕರಿಸಿರುವ ಶ್ರೀರಾಮುಲು ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದರೆ, ಬಿಜೆಪಿ ಕಣಕ್ಕೆ ಬಳ್ಳಾರಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಗಾದಿ ಲಿಂಗಪ್ಪನವರನ್ನು ಇಳಿಸಿದೆ.
ಶಾಸಕ ಆನಂದ್ ಸಿಂಗ್ ಸೇರಿದಂತೆ ಅನೇಕ ಬಿಜೆಪಿ ಶಾಸಕರು ಶ್ರೀರಾಮುಲುಗೆ ಬೆಂಬಲ ಸೂಚಿಸಿರುವುದು ಬಿಜೆಪಿಗೆ ಭಾರೀ ತಲೆನೋವು ತಂದಿದೆ. ಇಂದು ನಾಮಪತ್ರ ಸಲ್ಲಿಸುವಾಗ ಕೂಡ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಇಲ್ಲದಿದ್ದುದು ಸಾಕಷ್ಟು ಮುಜುಗರಕ್ಕೆ ಈಡು ಮಾಡಿದೆ.
ಆದರೆ, ಇಂದು ಬಾರದೆ ಕೈಕೊಟ್ಟ ಶಾಸಕರು ಮತ್ತು ಕಾರ್ಯಕರ್ತರ ವಿರುದ್ಧ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿರುವ ಈಶ್ವರಪ್ಪ, ಚುನಾವಣೆ ಪ್ರಚಾರಕ್ಕೆ ಅವರ ಮನವೊಲಿಸಿ ಕರೆತರಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದಿದ್ದಾರೆ.
ಇದಕ್ಕೂ ಮೊದಲು, ಕಾಂಗ್ರೆಸ್ ಪಕ್ಷ 2008ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ರಾಮಪ್ರಸಾದ್ ಅವರಿಗೆ ಟಿಕೆಟ್ ನೀಡಿದ್ದು, ಭಾರೀ ರೋಡ್ ಶೋ ಮುಖಾಂತರ ನಾಮಪತ್ರ ಸಲ್ಲಿಸಲಾಯಿತು. ಚುನಾವಣೆಯ ಕಣದಿಂದ ಹೊರಗುಳಿದಿರುವ ಜೆಡಿಎಸ್ ಶ್ರೀರಾಮುಲುವನ್ನು ಬೆಂಬಲಿಸಿ ರಾಜಕೀಯ ತಂತ್ರ ಹೂಡಿದೆ.












Click it and Unblock the Notifications