ಯಡಿಯೂರಪ್ಪಗೆ ಜೈಲಿನಲ್ಲಿ 'ಫಸ್ಟ್ ನೈಟ್' ಅನುಭವ ಹೇಗಿತ್ತು!?
ಊಟ ಮಾಡದೆ, ಟಿವಿ ನೋಡುತ್ತಾ ಹಾಗೆಯೇ ಮಂಚದ ಮೇಲೆ ಮುದುರಿಕೊಂಡಿದ್ದ ಯಡಿಯೂರಪ್ಪಗೆ ಮೊದಲು ಬೆನ್ನು ನೋವು ಕಾಣಿಸಿಕೊಂಡಿದೆ. ಇದರಿಂದ ಎಚ್ಚರವಾಗಿ ದಿಗ್ಗಂತ ಎದ್ದು ಕುಳಿತ ಅವರ ದೇಹದಲ್ಲಿ ರಕ್ತ ಒಂದೇ ಏಟಿಗೆ ಜಲ್ಲಂತ ಸಂಚರಿಸಿದೆ. ಇದರಿಂದ ಕಣ್ಣಿಗೆ ಕತ್ತಲೆ ಕಟ್ಟಿದಂತಾಗಿದೆ. ಆಗ ವಾಂತಿಯೂ ಮಾಡಿಕೊಂಡಿದ್ದಾರೆ. ಅದಾದ ನಂತರ ಎದೆ ಹಿಡಿದುಕೊಂಡಿದೆ.
ಇದೆಲ್ಲ ಆಗುವ ವೇಳೆಗೆ ಮಧ್ಯರಾತ್ರಿ ಕಳೆದಿತ್ತು. ಅಂದರೆ ಜೈಲಿನಲ್ಲಿ ಅರ್ಧ ರಾತ್ರಿಯನ್ನಷ್ಟೇ ಕಳೆದಿದ್ದ ಕೈದಿ ನಂ. 10462 (ಯಡಿಯೂರಪ್ಪ) ಅಲ್ಲೇ ಇದ್ದ ಅತ್ಯಾಪ್ತ ಸಿದ್ಲಿಂಗುಗೆ 'ಇನ್ನು ನನ್ನ ಕೈಯಲ್ಲಿ ತಡೆಯೋಕಾಗೊಲ್ಲ. ನಡಿ ದೇವಾ! ಜಯದೇವಗೆ ಹೋಗೋಣಾ ಅಂದಿದ್ದಾರೆ. ಅದರಂತೆ 2 ಗಂಟೆಯ ಸುಮಾರಿಗೆ ಜಯದೇವ ಆಸ್ಪತ್ರೆ ಸೇರಿಕೊಂಡಿದ್ದಾರೆ.
ಆಸ್ಪತ್ರೆಯ ನಿರ್ದೇಶಕ ಡಾ. ಸಿ. ಎನ್, ಮಂಜುನಾಥ್ ಅವರು ಭಾನುವಾರ ಬೆಳಗ್ಗೆಯೂ ಯಡಿಯೂರಪ್ಪಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದು, ವರದಿ ಸಿದ್ಧಪಡಿಸಿದ ಬಳಿಕ ವಿಚಾರಣಾಧೀನ ಕೈದಿಯನ್ನು ಆಸ್ಪತ್ರೆಯಲ್ಲೇ ಇಟ್ಟುಕೊಳ್ಳುತ್ತಾರಾ ಅಥವಾ ಜೈಲಿಗೆ ವಾಪಸ್ ಅಟ್ಟುತ್ತಾರಾ? ಎಂಬುದು ಸುಮಾರು 9.30 ರ ವೇಳೆಗೆ ಸ್ಪಷ್ಟಗೊಳ್ಳಲಿದೆ.
ಈ ಮಧ್ಯೆ, ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಆಸ್ಪತ್ರೆಯ ಭದ್ರತೆಯನ್ನು ಪರಿಶೀಲಿಸುವುದರ ಜತೆಜತೆಗೆ ಯಡಿಯೂರಪ್ಪನವರ ಆರೋಗ್ಯವನ್ನೂ ಖುದ್ದಾಗಿ ವಿಚಾರಿಸಿಕೊಂಡರು.