ಅನಂತ ಪದ್ಮನಾಭಸ್ವಾಮಿ ಸಂಪತ್ತು 3ಡಿ ದೃಶ್ಯಗಳಲ್ಲಿ ದಾಖಲೆ
ದೇವಾಲಯದಲ್ಲಿ ಪತ್ತೆಯಾದ ಅಮೂಲ್ಯ ವಸ್ತುಗಳ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವುದು, ಅಮೂಲ್ಯ ನಿಧಿಯ ಕುರಿತಂತೆ ಕಂಪ್ಯೂಟರೀಕೃತ ಡಾಟಾಬೇಸ್ ರಚನೆ ಈ ದಾಖಲೀಕರಣ ಪ್ರಕ್ರಿಯೆಯಲ್ಲಿ ಒಳಗೊಂಡಿವೆ ಎಂದು ಸುಪ್ರೀಂಕೋರ್ಟ್ನಿಂದ ನೇಮಿಸಲ್ಪಟ್ಟ ತಜ್ಞರ ಸಮಿತಿಯು ಶನಿವಾರ ನಡೆಸಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೇರಳ ರಾಜ್ಯ ಎಲೆಕ್ಟ್ರಾನಿಕ್ ನಿಗಮವು ದಾಖಲೀಕರಣ ಪ್ರಕ್ರಿಯೆಯ ಉಸ್ತುವಾರಿ ವಹಿಸಲಿದೆ. ಇಸ್ರೋದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರವು ತಾಂತ್ರಿಕ ಪರಿಣತಿಯನ್ನು ಒದಗಿಸಲಿದೆ.
ಅನಂತಪದ್ಮನಾಭ ದೇವಾಲಯದ ನಿಧಿಯ ದಾಖಲೀಕರಣ ಕಾರ್ಯದ ಪೂರ್ತಿ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸಲಿದೆ. ದಾಖಲೀಕರಣ ಪ್ರಕ್ರಿಯೆಯನ್ನು ನವೆಂಬರ್ 9ರಂದು ಆರಂಭಿಸಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಪೂರ್ವಸಿದ್ಧತೆಗಾಗಿ ನವೆಂಬರ್4ರಂದು ಇನ್ನೊಂದು ಸಭೆಯನ್ನು ಕರೆಯಲಾಗುವುದೆಂದು ತಜ್ಞರ ಸಮಿತಿಯ ಅಧ್ಯಕ್ಷರಾದ ಸಿವಿ ಆನಂದ ಬೋಸ್ ತಿಳಿಸಿದ್ದಾರೆ.
16ನೆ ಶತಮಾನದಷ್ಟು ಪುರಾತನವಾದ ಈ ದೇವಾಲಯದ ನೆಲಮಾಳಿಗೆಯಲ್ಲಿರುವ ಆರು ರಹಸ್ಯ ಕೊಠಡಿಗಳನ್ನು ತೆರೆಯಲಾಗಿದ್ದು, ಅವುಗಳಲ್ಲಿ ಚಿನ್ನ, ವಜ್ರ ಸೇರಿದಂತೆ ಒಂದು ಲಕ್ಷ ಕೋಟಿ ರೂ.ಗೂ ಅಧಿಕ ಬೆಲೆಬಾಳುವ ಸಂಪತ್ತು ಪತ್ತೆಯಾಗಿದೆ. ಆದರೆ ಬಿ ಕೊಠಡಿಯನ್ನು ಮಾತ್ರ ಇನ್ನೂ ತೆರೆಯಲಾಗಿಲ್ಲ.
ಬಿ ಕೊಠಡಿಯನ್ನು ತೆರೆಯುವ ವಿಚಾರದಲ್ಲಿ ತನ್ನದೇ ವಿವೇಚನೆಗನುಗುಣವಾಗಿ ನಡೆಯುವುದಾಗಿ ತಿಳಿಸಿರುವ ಸುಪ್ರೀಂಕೋರ್ಟ್ ಈ ವಿಚಾರದಲ್ಲಿ ಅರ್ಚಕರ ಜತೆ ಸಮಾಲೋಚಿಸುವುದಿಲ್ಲವೆಂದು ಸ್ಪಷ್ಟಪಡಿಸಿದೆ