ರೆಡ್ಡಿ ಬಿಡುಗಡೆ ನಂತರ ಮುಂದಿನ ನಡೆ : ಶ್ರೀರಾಮುಲು
ಶ್ರೀರಾಮುಲು ಅವರಿಗೆ ಸಚಿವ ಸ್ಥಾನ ನೀಡಿ ಎನ್ನುವ ಜಿಲ್ಲೆಯ ಶಾಸಕರು, ಸಂಸದರ ಬೇಡಿಕೆ ಒಂದೆಡೆ ಆದರೆ, ಮತ್ತೊಂದೆಡೆ ಕಾನೂನಿನ ತೊಡಕುಗಳು. ಈ ಮಧ್ಯೆ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಶ್ರೀರಾಮುಲು ಅವರನ್ನು ಸಚಿವರನ್ನಾಗಿ ಮಾಡುವುದು ಸಾಧ್ಯವಿಲ್ಲ ಎಂದು ಖಂಡಡವಾಗಿ ಹೇಳಿದ್ದಾರೆ.
ಈ ಎಲ್ಲಾ ಬೆಳವಣಿಗಳ ಕುರಿತು ಈವರೆಗೆ ಮೌನವಹಿಸಿದ್ದ ಶ್ರೀರಾಮುಲು, ಮಹರ್ಷಿ ವಾಲ್ಮೀಕಿ ಜಯಂತಿಯ ನಂತರ ಮಾಧ್ಯಮಗಳ ಜೊತೆ ಮಾತನಾಡುತ್ತ, ಅಧಿಕಾರ ಯಾರೊಬ್ಬರಿಗೂ ಶಾಶ್ವತವಲ್ಲ. ಜನತೆಯ ಅಭಿಮಾನ, ಆಶೀರ್ವಾದ, ಪ್ರೀತಿ - ಗೌರವಗಳೇ ನನಗೆ ಶ್ರೀರಕ್ಷೆ. ನಾನಾಗಲೀ, ನಮ್ಮ ಆಪ್ತರು ಯಾರೇ ಆಗಲಿ ಎಂದೂ ಕುರ್ಚಿಗೆ ಅಂಟಿಕೊಂಡಿಲ್ಲ. ಬಡವರು, ದೀನರು ಮತ್ತು ದುರ್ಬಲರ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ಅಧಿಕಾರಕ್ಕಾಗಿ, ಕೀರ್ತಿಗಾಗಿ ಅಲ್ಲ ಎಂದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಕುರಿತು ಮಾಜಿ ಸಚಿವ ಜಿ. ಕರುಣಾಕರ ರೆಡ್ಡಿ, ಕೆಎಂಎಫ್ ಅಧ್ಯಕ್ಷ, ಶಾಸಕ ಜಿ.ಸೋಮಶೇಖರ ರೆಡ್ಡಿ ಮತ್ತು ನನ್ನ ಅಭಿಮಾನಿಗಳ ಜೊತೆ ಚರ್ಚೆ ನಡೆಸಿ ಕೆಲ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಅವರು ಹೇಳಿದರು. ಸಂಸದೆ ಜೆ. ಶಾಂತಾ, ಬುಡಾ ಅಧ್ಯಕ್ಷ ಗುರುಲಿಂಗನಗೌಡ, ಕೆಎಂಎಫ್ ಅಧ್ಯಕ್ಷ, ಶಾಸಕ ಜಿ. ಸೋಮಶೇಖರರೆಡ್ಡಿ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.