ಆಕೆ ಕೊಂಡ ಹೊಸ ಕಾರಿನ ರಿಬ್ಬನ್ ಕೂಡ ಕತ್ತರಿಸಿರಲಿಲ್ಲ!
ಈ ಅನ್ಯಾಯದ ಮತ್ತು ವಿನಾಕಾರಣ ಆದ ಕೊಲೆಯನ್ನು ಅರಗಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಅವರಲ್ಲಿನ ಶಿಸ್ತು, ಶ್ರದ್ಧೆ, ಒಳ್ಳೆಯತನ... ಅವರನ್ನು ಕಳೆದುಕೊಂಡ ಬಂಧುಗಳಿಗೆ, ಸ್ನೇಹಿತರಿಗೆ ಮತ್ತಷ್ಟು ದುಃಖ ತಂದಿದೆ.
ಆಯುಧ ಪೂಜೆಯ ದಿನ ಅವರಿಂದಲೇ ಪೂಜೆಗೊಳಗಾಗಿ ಸಂಭ್ರಮಿಸಿದ ಹೊಸದಾಗಿ ಕೊಂಡ ಕಾರಿನ ರಿಬ್ಬನ್ ಕೂಡ ಕಟ್ ಮಾಡಿರಲಿಲ್ಲ. ಅಷ್ಟರಲ್ಲೇ ಅವರ ಜೀವನಾಡಿಯನ್ನೇ ದುರುಳ ಸೆಕ್ಯೂರಿಟ್ ಗಾರ್ಡ್ ನೊಬ್ಬ ಕತ್ತರಿಸಿಹಾಕಿಬಿಟ್ಟ.
ವಿಜಯದಶಮಿ ಹಿಂದಿನ ದಿನ ಸಂಭ್ರಮದಿಂದ ಪೋಲೋ ಗಾರ್ಡ್ ಅಪಾರ್ಟ್ ಮೆಂಟಿನ ಫ್ಲಾಟಿನಲ್ಲಿ ಆಯುಧ ಪೂಜೆ ಮಾಡಿದ್ದ ಅನುಸೂಯ ಬಂಧುಮಿತ್ರರಿಗೆ ಸಂತಸದಿಂದಲೇ ಸಿಹಿಯನ್ನೂ ಹಂಚಿದ್ದರು. ಆದರೆ, ಇಂದು ಅವರನ್ನು ಬಲ್ಲ ಎಲ್ಲರಲ್ಲಿಯೂ ಕಹಿಯನ್ನು ಉಳಿಸಿ ಬಹುದೂರ ಸಾಗಿಬಿಟ್ಟಿದ್ದಾರೆ.
ಹತ್ಯೆಯಾಗಿ ಕೆಲ ಗಂಟೆಗಳವರೆಗೆ ಹೃದಯಬೇನೆಯಿಂದ ನರಳುತ್ತಿರುವ 70 ವರ್ಷದ ಅವರ ತಾಯಿಗೆ ಮಗಳು ಸತ್ತಿರುವುದು ತಿಳಿದಿರಲಿಲ್ಲ. ಹಿರಿಮನಸ್ಸಿನ ಹೃದಯ ನಿಂತೇಹೋದೀತೆಂದು ನೆರೆಹೊರೆಯವರು ಅವರ ತಾಯಿಗೆ ತಿಳಿಸಲು ಹಿಂದೇಟು ಹಾಕಿದ್ದರು.
ನಾಲ್ಕು ವರ್ಷಗಳಿಂದ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಅಶ್ರಫ್ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಹತ್ಯೆ ಆಗಿದ್ದು ಯಾಕೆ? ಉದ್ದೇಶಪೂರ್ವಕವೆ? ಅಕಸ್ಮಾತಾಗಿ ಆಗಿಹೋಯಿತೆ? ಕೊಲೆಯ ಜಾಡುಹಿಡಿದಿರುವ ಪೊಲೀಸರು ಈ ಚಿದಂಬರ ರಹಸ್ಯವನ್ನು ಬಿಡಿಸಬೇಕಿದೆ.