ಜನಾ ರೆಡ್ಡಿ ಕನ್ನಡದ ನಿಜ ಮಣ್ಣಿನ ಮಗಧೀರ !

ಸಿಂಹ ಎಲ್ಲಿದ್ರೂ ಸಿಂಹನೇ ಎಂದು ಬಳ್ಳಾರಿಯ ಕೆಂಪು ಮಣ್ಣಿನ ಮಗ ಜನಾರ್ದನ ರೆಡ್ಡಿ ಪರ ವಾದ ಮಂಡಿಸಬಹುದು. ಜನಾ ರೆಡ್ಡಿಯನ್ನು ಮಣ್ಣಿನ ಮಗ ಎಂದರೆ ದೊಡ್ಡ ಗೌಡರ ಹೊಟ್ಟೆಯಲ್ಲಿ ತಳಮಳವಾಗಬಹುದು. ಸಾಮಾನ್ಯ ಪೇದೆಯ ಮಗನಾದ ರೆಡ್ಡಿ, ಕೆಂಪು ಮಣ್ಣಿನಿಂದ ಚಿನ್ನದ ಸಾಮ್ರಾಜ್ಯ ಸೃಷ್ಟಿಸಿ, ಈಗ ಎಲ್ಲವನ್ನೂ ಕಳೆದುಕೊಂಡಿರುವುದು ಚಂದಮಾಮ ಕಥೆಯಂತ್ತಿದೆ.
ಆದ್ರೆ, ಸದ್ಯದ ಪರಿಸ್ಥಿತಿಯಲ್ಲಿ ಜನಾ ರೆಡ್ಡಿಯ ಮಾನಸಿಕ ದೃಢತೆಯನ್ನು ಮೆಚ್ಚಲೇಬೇಕು. ಚಿನ್ನದ ಅರಮನೆಯಲ್ಲಿದ್ದ ವ್ಯಕ್ತಿ ಸಡನ್ ಆಗಿ ಕಲ್ಲುಹಾಸಿನ ನೆಲಕ್ಕೆ ಕುಸಿದರೂ ರೆಡ್ಡಿ ಕಂಗಾಲಾಗಿಲ್ಲ. ಮಾಧ್ಯಮಗಳು 'ಬಳ್ಳಾರಿ ಬಕಾಸುರ' ಎಂದು ಕರೆದರೂ ರೆಡ್ಡಿ ಕಮಕ್ ಕಿಮಕ್ ಅಂದಿಲ್ಲ
ಆರೋಗ್ಯವಂತ ರೆಡ್ಡಿ vs ಪೇಶೆಂಟ್ ವಿಐಪಿಗಳು: ವಿಐಪಿ ಖೈದಿಗಳ ಪರಂಪರೆ ಶುರುವಾಗುವುದು ಮಾನ್ಯ ಮಾಜಿ ಸಚಿವ ಹರತಾಳು ಹಾಲಪ್ಪ ಅವರಿಂದ. ಒಂದು ದಿನ ಕೂಡಾ ಜೈಲು ಬಾಗಿಲ ದರ್ಶನ ಮಾಡದೆ, ಎದೆನೋವು, ಸೊಂಟ ನೋವು ಎನ್ನುತ್ತಾ ವಿಕ್ಟೋರಿಯಾ, ಮಲ್ಯ ಆಸ್ಪತ್ರೆಗೆ ವೀಲ್ ಚೇರ್ ಹತ್ತಿ ಪ್ರವಾಸ ಮಾಡಿ ಜಾಮೀನು ಪಡೆದು ಊರು ಸೇರಿದರು.
ಮಾಜಿ ಸಿಎಂ ಆಗ್ತಾರೆ ಸಡನ್ ಪೇಶೆಂಟ್: ಕೋರ್ಟ್ ವಿಚಾರಣೆ ತಪ್ಪಿಸಿಕೊಳ್ಳಲು ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ ಹಾಗೂ ಎಚ್ ಡಿ ಕುಮಾರಸ್ವಾಮಿ ಅವರು ಕೂಡಾ ಸಡನ್ ಆಗಿ ಅನಾರೋಗ್ಯ ಪೀಡಿತರಾಗಿ ಬಿಡುತ್ತಾರೆ. ಇಬ್ಬರಿಗೂ ಬಿಪಿ, ಹಾರ್ಟ್ ಪ್ರಾಬ್ಲಂ ಇದೆ ಅನ್ನೋ ವಿಷ್ಯ ಹಾಗಿರಲಿ, ವಿಚಾರಣೆ ಸಂದರ್ಭದಲ್ಲೇ ರೋಗ ಉಲ್ಬಣ ಆಗುತ್ತದೆ. ಜೈಲು ಭೀತಿಯಿಂದ ಹೇಡಿಗಲ ಥರಾ ಆಸ್ಪತ್ರೆ ಸೇರೋ ನಾಟಕ ಆಡಿದ್ದಾರೆ.
ಕಟ್ಟಾಗೆ ಮೈಯೆಲ್ಲಾ ರೋಗ: ಕಟ್ಟಾ ಅಂಡ್ ಸನ್ ಒಂದು ದಿನ ಜೈಲಿನಲ್ಲಿ ಸೊಳ್ಳೆ ಕೈಲಿ ಕಚ್ಚಿಸಿಕೊಂಡಿದ್ದೆ ತಡ ದೇಹದ ಅಂಗಾಂಗಗಳೆಲ್ಲ ಹಂತ ಹಂತವಾಗಿ ರೋಗಕ್ಕೆ ಈಡಾಗಿಬಿಟ್ಟಿತ್ತು, ಹೊಟ್ಟೆನೋವು, ಕಾಲುನೋವು, ಬಿಪಿ, ಶುಗರ್ ಜೊತೆ ಕುತ್ತಿಗೆ ನೋವು ಕಟ್ಟಾ ಸುಬ್ರಮಣ್ಯ ನಾಯ್ಡು ಅವರನ್ನು ಕಾಡಿಸುತ್ತಿದೆ. ಆಸ್ಪತ್ರೆಯಿಂದ ಜೈಲಿಗೆ ಹೋಗೋ ಲಕ್ಷಣಗಳು ಸದ್ಯಕ್ಕಿಲ್ಲ.
ದೆಹಲಿಯಲ್ಲಿ ಅಮರ್ ಸಿಂಗ್ ಕೂಡಾ ನನ್ನ ಕಿಡ್ನಿ ಎರವಲು ಪಡೆದಿದ್ದು, ನನಗೆ ಜೈಲುವಾಸ ಕಷ್ಟ ಎಂದು ಸುದ್ದಿ ಮಾಡಿದ್ದರು. ಆದರೆ, ಇವರೆಲ್ಲರ ನಡುವೆ ಬಳ್ಳಾರಿಯ ಗಣಿಧಣಿ ರೆಡ್ಡಿ ಎದ್ದೆಯುಬ್ಬಿಸಿ ಧೈರ್ಯವಾಗಿ ಸಿಬಿಐ ವಿಚಾರಣೆಯಲ್ಲಿ ಭಾಗವಹಿಸಿದ್ದಾರೆ.
ಜೈಲಿನಲ್ಲಿ ಸಾಮಾನ್ಯ ಖೈದಿಯಂತೆ ಮರದ ಕೆಳಗೆ ಸ್ನಾನ, ಅಲ್ಯುಮಿನಿಯಂ ತಟ್ಟೆಯಲ್ಲಿ ಗ್ರಾಂ ಲೆಕ್ಕದಲ್ಲಿ ಊಟ ಮಾಡುತ್ತಾ ಬೇರೆಲ್ಲಾ ನಾಯಕರಿಗಿಂತ ಜನಾ ರೆಡ್ಡಿ ಭಿನ್ನವಾಗಿ ನಿಂತಿದ್ದಾರೆ. ಅಥವಾ ಬೇರೆ ನಾಯಕರಿಗಿದ್ದಂತೆ ತಪ್ಪಿಸಿಕೊಳ್ಳುವ ಜಾಣ್ಮೆ ರೆಡ್ಡಿಗೆ ಇಲ್ಲದಿರಬಹುದು.
ಆದರೆ, ಈ ಮುಂಚೆ ಕೋರ್ಟ್ ವಿಚಾರಣೆ ಹಲವು ಬಾರಿ ತಪ್ಪಿಸಿಕೊಂಡ ದಾಖಲೆ ಮಾತ್ರ ಜನಾ ರೆಡ್ಡಿ ಹೆಸರಲ್ಲೇ ಇದೆ.












Click it and Unblock the Notifications