ನಿದ್ದೆಯಲ್ಲಿದ್ದ ಜನಾ ರೆಡ್ಡಿ ಬಂಧನವಾದದ್ದು ಹೇಗೆ?

ಭಾನುವಾರ ರಾತ್ರಿಯೇ ಬಳ್ಳಾರಿಯ ಪೊಲೀಸ್ ಜಿಂಖಾನಾಕ್ಕೆ ರಹಸ್ಯವಾಗಿ ಆಗಮಿಸಿ ತಂಗಿದ್ದ ಸಿಬಿಐಯ ಡಿಐಜಿ ಲಕ್ಷ್ಮೀನಾರಾಯಣ ನೇತೃತ್ವದ 25ಕ್ಕೂ ಹೆಚ್ಚಿನ ಅಧಿಕಾರಿಗಳ ತಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ಅವರಿಗೆ ಮಾಹಿತಿ ನೀಡಿ, ನಸುಕಿನ 3.30ರ ಸುಮಾರಿಗೆ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ಜಿಂಖಾನಾಕ್ಕೆ ಕಳುಹಿಸಿಕೊಡಲು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ಅವರ ಮಾಹಿತಿಯನ್ನು ಆಧರಿಸಿ ಕೌಲ್ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಆಯ್ದ ಪೊಲೀಸರು ಸಮವಸ್ತ್ರಧಾರಿಗಳಾಗಿ 3.45ರ ವೇಳೆಗೆಲ್ಲಾ ಜಿಂಖಾನವನ್ನು ಸೇರಿದ್ದರು. ಸಿಬಿಐ ಅಧಿಕಾರಿಗಳು ಪೊಲೀಸ್ ಜಿಂಖಾನದ ಪ್ರಾಂಗಣವನ್ನು ಪ್ರವೇಶಿಸಿದಾಗ ನಸುಕಿನ 5 ಗಂಟೆ. ನಸುಕಿನ 5.15ರ ಸುಮಾರಿಗೆ ದಾಳಿಯ ಯೋಜನೆ ಜಾರಿ ಆಯಿತು.
5.45ರ ಸುಮಾರಿಗೆ ತಂಡ ಜನಾರ್ದನ ರೆಡ್ಡಿ ಅವರ ಮನೆಯನ್ನು ಪ್ರವೇಶಿಸಿತು. ಕಾವಲುಗಾರರು ತಂಡ ಮನೆಯನ್ನು ಪ್ರವೇಶಿಸಲು ತೀವ್ರ ವಿರೋಧ ವ್ಯಕ್ತಪಡಿಸಿದರು. ಆಗ, ಸಿಬಿಐ ಡಿಐಜಿ ಲಕ್ಷ್ಮೀನಾರಾಯಣ ಅವರೇ ಖುದ್ದಾಗಿ ಕಾವಲುಗಾರರ ಬಳಿ ಆಗಮಿಸಿ, ಗುರುತಿನಪತ್ರ ತೋರಿಸಿ, ವಿವರಣೆ ನೀಡಿದ ನಂತರ ಕಾವಲುಗಾರರು ಕಾಂಪೌಂಡ್ ಪ್ರವೇಶಕ್ಕೆ ಅವಕಾಶ ನೀಡಿದರು.
ನಿದ್ದೆಯಲ್ಲಿದ್ದ ಜನಾರ್ದನ : ಸಿಬಿಐ ತಂಡ ಜಿ. ಜನಾರ್ದನರೆಡ್ಡಿ ಅವರ ಮನೆಯನ್ನು ಪ್ರವೇಶಿಸಿದಾಗ 5.50ರ ಆಸುಪಾಸಾಗಿತ್ತು. ನಿದ್ರೆಯಲ್ಲಿದ್ದ ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಅಧಿಕಾರಿಗಳ ತಂಡವೇ ಎಚ್ಚರಿಸಿತು. ಪರಸ್ಪರರು ಗೌರವಯುತವಾಗಿಯೇ ಪರಿಚಯಿಸಿಕೊಂಡರು. ನಸುಕಿನ 6.30ರ ಸುಮಾರಿಗೆ ಈ ವಿಷಯ ಕಾಡ್ಗಿಚ್ಚಿನಂತೆ ವ್ಯಾಪಿಸಿತು. ಇದೇ ಸಂದರ್ಭದಲ್ಲಿ ಸಿಬಿಐ ಎರಡು ತಂಡಗಳಾಗಿ 10 ಅಧಿಕಾರಿಗಳು ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಬಿ. ಶ್ರೀನಿವಾಸರೆಡ್ಡಿ ಅವರ ಮನೆ ತಲುಪಿತು. ಇದೇ ಸಂದರ್ಭದಲ್ಲೇ ಬೆಂಗಳೂರಿನ ಪಾರಿಜಾತದಲ್ಲೂ ಕೂಡ ಸಿಬಿಐ ದಾಳಿ ನಡೆಸಿತು.
ನಸುಕಿನ 7 ಗಂಟೆ ಸುಮಾರಿಗೆ ಜನಾರ್ದನ ರೆಡ್ಡಿ ಅವರನ್ನು ವಶಕ್ಕೆ ತೆಗೆದುಕೊಂಡ ಸಿಬಿಐ ಅಧಿಕಾರಿಗಳು ರೆಡ್ಡಿಗಳ ಮಾಲೀಕತ್ವದ ಇನ್ನೋವಾ ಕಾರ್ನಲ್ಲೇ ಒಂದು ಫರ್ಲಾಂಗ್ ದೂರದಲ್ಲಿ ಇರುವ ಬಿ. ಶ್ರೀನಿವಾಸ ರೆಡ್ಡಿ ಅವರ ಮನೆಗೆ ತೆರಳಿದರು. ಜನಾರ್ದನ ರೆಡ್ಡಿ ಕಾರು ಇಳಿಯಲು ಅಧಿಕಾರಿಗಳು ಅವಾಕಾಶ ನೀಡಲಿಲ್ಲ. ಶ್ರೀನಿವಾಸ ರೆಡ್ಡಿಯನ್ನು ಮನೆಯಲ್ಲೇ ವಶಕ್ಕೆ ತೆಗೆದುಕೊಂಡ ತಂಡ, ಅವರ ಜೊತೆ ಮಾತನಾಡುತ್ತಲೇ ಇಡೀ ಮನೆಯನ್ನು ಕಾಂಪೌಂಡ್ನಲ್ಲಿ ಒಂದು ಸುತ್ತು ಹಾಕಿತು.
ಬೆಚ್ಚಿದಿದ್ದ ಶ್ರೀನಿವಾಸ ರೆಡ್ಡಿ : ಆ ನಂತರ ಇನ್ನೋವಾಕಾರ್ನಲ್ಲಿ ಕೂಡಲು ತಿಳಿಸಿದಾಗ ಶ್ರೀನಿವಾಸ ರೆಡ್ಡಿ ಬೆಚ್ಚಿಬಿದ್ದರು. ಇನ್ನೋವಾದಲ್ಲಿ ತಮಗಿಂತಲೂ ಮುಂದೆಯೇ ಜನಾರ್ದನ ರೆಡ್ಡಿ ಇರುವುದನ್ನು ಕಂಡು ಮೂಕಸ್ಮಿತರಾದರು. ಮೌನಕ್ಕೆ ಶರಣಾದರು. ಈ ಇಬ್ಬರ ಮಧ್ಯೆ ಮಾತಿಲ್ಲ. ಮೌನ, ಪರಸ್ಪರ ಮುಖಮುಖ ನೋಡಿಕೊಳ್ಳುವುದೊಂದೇ ನಡೆಯಿತು. ಶ್ರೀನಿವಾಸ ರೆಡ್ಡಿ ಅವರ ಮನೆಯ ಗೇಟ್ನಲ್ಲೇ ಕಾಯುತ್ತಿದ್ದ ಮಾಧ್ಯಮಗಳತ್ತ ದಿಕ್ಕುತ್ಪಪಿಸಿದ ಸಿಬಿಐ ಅಧಿಕಾರಿ ಲಕ್ಷ್ಮೀನಾರಾಯಣ ಇನ್ನೋವಾವನ್ನು ಸಾಗಿಸಿದರು.












Click it and Unblock the Notifications