ಕೆಲವೇ ಕ್ಷಣಗಳಲ್ಲಿ ಬಿಜೆಪಿಗೆ ಇತಿ 'ಶ್ರೀ'ರಾಮುಲು

ಇದರಿಂದ ರಾಜ್ಯ ರಾಜಕೀಯ ಮತ್ತೊಮ್ಮೆ ಕುತೂಹಲದ ಗೂಡಾಗಿದೆ. ಯಡಿಯೂರಪ್ಪ ಕೇರಳದ ಕೊಟ್ಟಕಲ್ ಆಯುರ್ವೇದ ಆಸ್ಪತ್ರೆಗೆ ದಾಖಲಾಗಿದ್ದೇ ಬಂತು. ಸುಮಾರು ಎರಡು ತಿಂಗಳಿಂದ ರಾಜ್ಯದಲ್ಲಿ ಸತತವಾಗಿ ರಾಜಕೀಯ ವಿಪ್ಲವಗಳು ಘಟಿಸುತ್ತಿವೆ. ಇಂದಿನ ಬೆಳಣಿಗೆಗಳಿಗೆ ಎಂದಿನಂತೆ ದಟ್ಸ್ ಕನ್ನಡ ಸಾಕ್ಷಿಯಾಗಲಿದ್ದು, ತಾಜಾ ಬೆಳವಣಿಗೆಗಳಿಗಾಗಿ ದಟ್ಸ್ ಕನ್ನಡದತ್ತ ಕಣ್ಣು ಹಾಯಿಸುತ್ತಿರಿ.
ಪ್ರಸ್ತುತ ಬಳ್ಳಾರಿಯಲ್ಲಿರುವ ಶ್ರೀರಾಮುಲು ಬೆಳಗ್ಗೆ 11 ಗಂಟೆ ಸುಮಾರಿಗೆ ಬೆಂಗಳೂರಿಗೆ ಆಗಮಿಸಿ ತಮ್ಮ ರಾಜಕೀಯ ನಡೆಯೇನು ಎಂಬುದನ್ನು ಸುದ್ಧಿಗೋಷ್ಠಿಯ ಮೂಲಕ ಬಹಿರಂಗಪಡಿಸಲು ನಿರ್ಧರಿಸಿದ್ದಾರೆ.
ಲೋಕಾಯುಕ್ತ ವರದಿಯ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಕಳೆದುಕೊಂಡು ಹತಾಶರಾಗಿರುವ ರೆಡ್ಡಿ ಸೋದರರು, ನಂತರ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದರೂ ಯಶಸ್ಸು ಕಾಣದ ಹಿನ್ನೆಲೆಯಲ್ಲಿ, ಪಕ್ಷದಿಂದ ಹೊರಬಂದು ಹೊಸ ಪಕ್ಷ ಸ್ಥಾಪಿಸುವತ್ತಲೇ ಗಮನ ನೆಟ್ಟಿದ್ದಾರೆ.
ಶನಿವಾರವಿಡೀ ನಗರದ ಹವಂಭಾವಿಯಲ್ಲಿರುವ ಜಿ.ಜನಾರ್ದನ ರೆಡ್ಡಿ ಅವರ ನಿವಾಸ ಕುಟೀರದಲ್ಲಿ ಸಮಾನ ಮನಸ್ಕ ಶಾಸಕರು ಮತ್ತು ಕೆಲವು ಆಪ್ತ ಮುಖಂಡರೊಂದಿಗೆ ರಹಸ್ಯ ಸಭೆ ನಡೆಸಿದ ಶ್ರೀರಾಮುಲು, ಬಿಜೆಪಿಯಲ್ಲಿ ಉಳಿಗಾಲವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟು ತಮ್ಮನ್ನು ಬೆಂಬಲಿಸುವಂತೆ ಕೋರಿದ್ದಾರೆ ಎಂದು ತಿಳಿದುಬಂದಿದೆ.
ಶಾಸಕರಾದ ಹೂವಿನಹಡಗಲಿಯ ಚಂದ್ರಾ ನಾಯ್ಕ, ಹಗರಿ ಬೊಮ್ಮನಹಳ್ಳಿಯ ನೇಮಿರಾಜ ನಾಯ್ಕ, ಸಿರುಗುಪ್ಪದ ಎಂ.ಎಸ್. ಸೋಮಲಿಂಗಪ್ಪ, ಕಂಪ್ಲಿಯ ಸುರೇಶಬಾಬು, ಜಿ.ಸೋಮಶೇಖರರೆಡ್ಡಿ, ಸಂಸದರಾದ ಜೆ.ಶಾಂತಾ, ಸಣ್ಣಫಕೀರಪ್ಪ, ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ಸಭೆಯಲ್ಲಿ ಭಾಗವಹಿಸಿದ್ದರು. ಶಾಸಕರಾದ ಕೂಡ್ಲಿಗಿಯ ನಾಗೇಂದ್ರ, ಹೊಸಪೇಟೆಯ ಆನಂದ್ ಸಿಂಗ್ ಹಾಗೂ ದಾವಣಗೆರೆ ಜಿಲ್ಲೆ ಹರಪನಹಳ್ಳಿ ಶಾಸಕರಾಗಿರುವ ಜಿ.ಕರುಣಾಕರ ರೆಡ್ಡಿ ಸಭೆಯಲ್ಲಿ ಭಾಗವಹಿಸಿರಲಿಲ್ಲ.












Click it and Unblock the Notifications