ಕೈದಿ ನಂ.7801 ಕಟ್ಟಾ ಸುಬ್ರಹ್ಮಣ್ಯಗೆ ಮುಂದೇನಾಗಬಹುದು?

ಗಮನಾರ್ಹವೆಂದರೆ ಭ್ರಷ್ಟಾಚಾರ ಆರೋಪದಲ್ಲಿ ಜಾಮೀನು ನೀಡುವಾಗ ಹೈಕೋರ್ಟ್ಗಳು ಕೈಗೊಳ್ಳುವ ನಿರ್ಧಾರವನ್ನೇ ಸುಪ್ರೀಂಕೋರ್ಟ್ ಸಾಮಾನ್ಯವಾಗಿ ಬೆಂಬಲಿಸುತ್ತದೆ. ಜತೆಗೆ ಇತ್ತೀಚೆಗಷ್ಟೇ ರಾಜಾ, ಕನಿಮೋಳಿ, ಕಲ್ಮಾಡಿ ಅಂತಹ ಭ್ರಷ್ಟಾಚಾರಿಗಳಿಗೂ ಇದೇ ಗತಿಯಾಗಿದೆ.
ಈ ಹಿನ್ನೆಲೆಯಲ್ಲಿ ಕಟ್ಟಾಳುಗಳಿಗೆ ಅಲ್ಲೂ ಜಾಮೀನು ಸಿಗುವುದು ಅನುಮಾನ. ಸುಪ್ರೀಂಕೋರ್ಟ್ನಲ್ಲೂ ಜಾಮೀನು ಅರ್ಜಿ ತಿರಸ್ಕೃತಗೊಂಡರೆ ಅಪ್ಪ-ಮಗ ಕನಿಷ್ಠ ಆರು ತಿಂಗಳಾದರೂ ಜೈಲಿನಲ್ಲೇ ಬಂಧಿಗಳಾಗಿರಬೇಕಾಗುತ್ತದೆ.
ಸ್ವತಃ ಹೈಕೋರ್ಟ್, ಭೂ ಹಗರಣದ ಈ ತ್ರಿಮೂರ್ತಿಗಳ್ನು ಮಂಗಳವಾರ 'ಸ್ಟಾರ್ ಪ್ಲೇಯರ್ಸ್' ಎಂದು ಬಣ್ಣಿಸಿದ್ದು, ಜಾಮೀನು ಅರ್ಜಿಯನ್ನು ತಿರಸ್ಕರಿಸುತ್ತಿದ್ದಂತೆ, ತಾವು ಸುಪ್ರೀಂಕೋರ್ಟ್ಗೆ ಹೋಗುವುದಾಗಿ ಅವರ ಪರ ವಕೀಲರು ಘೋಷಿಸಿದರು. ಸದ್ಯಕ್ಕೆ ಅವರಿಗಿರುವ ಮಾರ್ಗ ಇದೊಂದೇ ಆಗಿದೆ. ಈ ವಾರದಲ್ಲೇ ಸುಪ್ರೀಂಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಕೆಯಾಗಲಿದ್ದು, ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಇನ್ನಾರು ತಿಂಗಳ ನಂತರ: ಜಾಮೀನು ಅರ್ಜಿ ವಿಚಾರಣೆ ಮುಗಿದು ತೀರ್ಪು ಪ್ರಕಟ ಆಗುವವರೆಗೆ ಕಟ್ಟಾಸುಬ್ರಹ್ಮಣ್ಯ ನಾಯ್ಡು ಅನಾರೋಗ್ಯದ ನೆಪವೊಡ್ಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲೇ ಆಶ್ರಯ ಪಡೆಯುವ ಸಾದ್ಯತೆಯೂ ಇದೆ. ಆರು ತಿಂಗಳ ಮುಗಿದ ನಂತರ ಮತ್ತೆ ಅಪ್ಪ-ಮಗ ವಿಶೇಷ ನ್ಯಾಯಾಲಯದ ಮೊರೆ ಹೋಗಿ ಜಾಮೀನಿಗೆ ಅರ್ಜಿ ಸಲ್ಲಿಸಬಹುದು. ಅಲ್ಲಿ ತಿರಸ್ಕೃತಗೊಂಡರೆ ಮತ್ತೆ ಹೈಕೋರ್ಟ್ ಮೊರೆ ಹೋಗಬಹುದು. ಆದರೆ ಈ ಸಾಧ್ಯತೆ ತನಿಖೆಯ ವ್ಯಾಪ್ತಿ ಹಾಗೂ ನ್ಯಾಯಾಲಯದ ವಿಚಾರಣೆಯನ್ನು ಅವಲಂಬಿಸಿರುತ್ತದೆ.
ಆರ್ ಬಿಐ ನಿಯಮದ ಪ್ರಕಾರ 20 ಸಾವಿರಕಿಂತ ಹೆಚ್ಚಿನ ಮೊತ್ತವನ್ನು ಯಾರಿಗಾದರೂ ಚೆಕ್ ಮೂಲಕ ಕೊಡಬೇಕಾದರೆ ಅದನ್ನು ಕ್ರಾಸ್ ಮಾಡಬೇಕು. ಆದರೆ ಕೋಟಿ ಕೋಟಿ ವ್ಯವಹಾರ ನಡೆಸಿದ್ದರೂ ಅಪ್ಪ-ಮಗ ನಿಯಮ ಪಾಲನೆ ಮಾಡಿಲ್ಲ. ಸತ್ತವರ ಹೆಸರಿನಲ್ಲೂ ಪರಿಹಾರ ಪಡೆದಿದ್ದಾರೆ. ಹುಚ್ಚನ ಹೆಸರಿನಲ್ಲೂ ಹಣ ದೋಚಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಮಾಜಿ ಸಚಿವರು ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ನಿನ್ನೆಯ ತೀರ್ಪಿನಲ್ಲಿ ಹೈಕೋರ್ಟ್ ಪೀಠ ಹೇಳಿದೆ.












Click it and Unblock the Notifications