BSNLಗೆ 20 ಲಕ್ಷ ಪಂಗನಾಮ ಹಾಕಿದ ಸಿಮ್ ವಂಚಕರು

ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಸಿಮ್ ಕಾರ್ಡು ವಿತರಣೆ ವೇಳೆ ದಾಖಲಾತಿಗಳನ್ನು ಸರಿಯಾಗಿ ಪರಿಶೀಲಿಸಿ, ಖಾತರಿ ಪಡಿಸಿಕೊಂಡೇ ಸಿಮ್ ಕಾರ್ಡು ವಿತರಿಸಬೇಕು ಎಂದು ಕೇಂದ್ರ ಸರಕಾರ ಎಲ್ಲ ಮೊಬೈಲ್ ಸೇವಾ ಕಂಪನಿಗಳಿಗೂ ಎಚ್ಚರಿಸುತ್ತಲೇ ಇದೆ. ಆದರೆ ಸ್ವತಃ ಸರಕಾರಿ ಇಲಾಖೆಯೇ ಇಲ್ಲಿ ಪಿಗ್ಗಿ ಬಿದ್ದಿದೆ.
ವಂಚಕರೂ, ವಾಚಾಳಿಗಳೂ ಆದ ನಕಲಿ ವೀರರು ಇಲಾಖೆಯ ದಾಖಲೆಗಾಗಿ ಮೊದಲು ನಕಲಿ ವಿಳಾಸ ನೀಡಿ ಐದು ಪೋಸ್ಟ್ ಪೇಯ್ಡ್ ಸಿಮ್ ಕಾರ್ಡ್ ಪಡೆದಿದ್ದಾರೆ. ತಕ್ಷಣವೇ ಈ ಮೂವರೂ ಒಂದೆರಡು ದಿನಗಳಲ್ಲಿ ವಿದೇಶಗಳಿಗೆ ಸತತ ಕರೆ ಮಾಡಿ ಬಿಎಸ್ಎನ್ಎಲ್ಗೆ 20 ಲಕ್ಷ ರೂ. ಬಿಲ್ ಮಾಡಿ ನಾಪತ್ತೆಯಾಗಿದ್ದಾರೆ.
ಪ್ರಶಾಂತ್ರಾವ್, ಈತನ ಪತ್ನಿ ಜ್ಯೋತಿ ಮತ್ತು ರೂಪೇಶ್ ಆನಂದ್ ನಾಯರ್ ಎಂಬುವವರು ಹೊಸಪೇಟೆಯ ಮೃತ್ಯುಂಜಯ ನಗರ ಹಾಗೂ ಚಿತ್ತವಾಡಿ ಪ್ರದೇಶದ ವಿಳಾಸ ನೀಡಿ ಸಿಮ್ ಕಾರ್ಡ್ ಪಡೆದಿದ್ದರು.
ಹೊಸಪೇಟೆಯ ಮನೆ ನಂ. 21 ರಿತಾ ನಿವಾಸ, 2ನೇ ಮಹಡಿ, 12ನೇ ಅಡ್ಡ ರಸ್ತೆ, ಮೃತ್ಯುಂಜಯ ನಗರ ವಿಳಾಸದ ದಾಖಲೆ ನೀಡಿದ ಪ್ರಶಾಂತ್ ರಾವ್, 9449006028 ಹಾಗೂ 9449006078 ನಂಬರಿನ ಪೋಸ್ಟ್ ಪೇಡ್ ಸಿಮ್ ಪಡೆದು ಈ ಎರಡು ನಂಬರಗಳಿಂದ 7.32 ಲಕ್ಷ ರೂ.ಗಳಷ್ಟು ವಿದೇಶಗಳಿಗೆ ಮತ್ತು ಇತರೆ ಕಡೆಗೆ ಕರೆ ಮಾಡಿದ್ದಾರೆ. ಆತನ ಪತ್ನಿ ಜ್ಯೋತಿ ಸಹ 9448073648 ಹಾಗೂ 9448082648 ನಂಬರಿನ ಸಿಮ್ ಪಡೆದು 7.30 ಲಕ್ಷ ರೂ. ಮೌಲ್ಯದ ಕರೆ ಮಾಡಿದ್ದಾರೆ. ಅಲ್ಲದೆ, ನಗರದ ಚಿತ್ತವಾಡಿ ಬಾಲ ಕಾಂಪೌಂಡು ವಿಳಾಸ ನೀಡಿರುವ ರೂಪೇಶ್ ಆನಂದ ನಾಯರ್ ಎಂಬಾತ ಕೂಡ 9449010589 ಸಿಮ್ ಪಡೆದು 5.47ಲಕ್ಷ ರೂ ಮೌಲ್ಯದ ಕರೆ ಮಾಡಿದ್ದಾರೆ. ಈ ಮೂವರು ಸೇರಿ ಒಟ್ಟು 20 ಲಕ್ಷ ರೂಪಾಯಿಯನ್ನು ಬಿಎಸ್ಎನ್ಎಲ್ ಪಂಗನಾಮ ಹಾಕಿದ್ದಾರೆ.
ಈ ಮೂವರು ಜೂನ್ ತಿಂಗಳಲ್ಲಿ ಬೇರೆ ಬೇರೆ ದಿನಾಂಕಗಳಲ್ಲಿ ಪಾಸ್ಪೋರ್ಟ್, ಮತದಾರರ ಗುರುತಿನ ಚೀಟಿ ಹಾಗೂ ಪ್ಯಾನ್ಕಾರ್ಡು ನೀಡಿ ಸಿಮ್ ಪಡೆದಿದ್ದಾರೆ. ಪ್ರಶಾಂತ ರಾವ್ 2 ಸಿಮ್, ಆತನ ಪತ್ನಿ ಜ್ಯೋತಿ 2 ಸಿಮ್ ಹಾಗೂ ರೂಪೇಶ್ ಆನಂದ ನಾಯರ್ ಒಂದು ಸಿಮ್ ಪಡೆದ ಬಗ್ಗೆ ಬಿಎಸ್ಎನ್ಎಲ್ನಲ್ಲಿ ದಾಖಲೆಗಳು ಇವೆ.
ಇವರು ಜುಲೈ 17 ಮತ್ತು 18ರಂದು ಮಾಡಿರುವ ಕರೆಗಳು ಹೆಚ್ಚಾಗಿ ಮಲೇಷ್ಯಾ, ಮಾಲ್ಡೀವ್ಸ್, ಹಾಂಕಾಂಗ್ ಗೆ ಹೋಗಿವೆ. ಜುಲೈ 18ರಂದು ಬೆಂಗಳೂರಿನ ಬಿಎಸ್ಎನ್ಎಲ್ ಅಕೌಂಟ್ ಆಫೀಸರ್ ಈ ನಂಬರುಗಳಿಂದ ಭಾರಿ ಮೊತ್ತದ ಕರೆ ಮಾಡಿರುವುದನ್ನು ಗಮನಿಸಿ ಹೊಸಪೇಟೆ ಬಿಎಸ್ಎನ್ಎಲ್ ಕಚೇರಿಗೆ ಮಾಹಿತಿ ನೀಡಿದ್ದಾರೆ. ಎಚ್ಚೆತ್ತ ಹೊಸಪೇಟೆ ಅಧಿಕಾರಿಗಳು ಸಂಖ್ಯೆಗಳನ್ನು ಪರಿಶೀಲಿಸಿ ಭಾನುವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಹೆಚ್ಚುವರಿ ಎಸ್ಪಿ ಕೆ.ಜೆ. ಖ್ಯಾತನ್ ತನಿಖೆ ನಡೆಸಿದ್ದಾರೆ.












Click it and Unblock the Notifications