ತುಮಕೂರಿನ ಒಣ ಭೂಮಿಯಲ್ಲಿ 1 ಶಾರ್ಕ್ ಪತ್ತೆ

ಒಂದೂವರೆ ವರ್ಷದ ಹಿಂದೆ ತುಮಕೂರು ಜಿಲ್ಲಾ ಅಬಕಾರಿ ಆಯುಕ್ತರಾಗಿ ವರ್ಗಾವಣೆಗೊಂಡಿದ್ದ ಮೂಲತಃ ಗುಲ್ಬರ್ಗ ಜಿಲ್ಲೆಯವರಾದ ಅರವಿಂದ ಎಸ್.ಮಂಗಾಣಿ, ವರ್ಗಾವಣೆಯಾಗಿ ಬಂದ ದಿನದಿಂದಲೂ ಪ್ರತಿಷ್ಠಿತ ಹೊಟೇಲ್ ವಿಘ್ನೇಶ್ವರ್ ಕಂಫರ್ಟ್ ನಲ್ಲೇ ವಾಸ್ತವ್ಯ ಹೂಡಿದ್ದರು.
ತಮ್ಮ ಹಾಗೂ ಪುತ್ರರ ಹೆಸರಿನಲ್ಲಿ ಮನೆ, ಜಮೀನು, ವಾಹನಗಳನ್ನು ಹೊಂದಿರುವ ಮಂಗಾಣೆ, ಗುಲ್ಬರ್ಗದ ಬ್ಯಾಂಕಿನಲ್ಲಿ ಪತ್ನಿ ಹಾಗೂ ಮಕ್ಕಳ ಹೆಸರಿನಲ್ಲಿ 2.6 ಕೋಟಿ ರೂಪಾಯಿ ಠೇವಣಿ ಇಟ್ಟಿದ್ದರು. ಇತ್ತೀಚಿನ ದಾಳಿಗಳಲ್ಲಿ ಇಷ್ಟೊಂದು ಅಗಾಧ ಪ್ರಮಾಣದ ಠೇವಣಿ ಹಣ ಪತ್ತೆಯಾಗಿರುವುದು ಇದೇ ಮೊದಲು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಲೋಕಾಯುಕ್ತ ಎಸ್ಪಿ ಜಗದೀಶ್ ಪ್ರಸಾದ್ ಮಾರ್ಗದರ್ಶನದಂತೆ ಡಿವೈಎಸ್ಪಿ ಮೇಗಣ್ಣನವರ್ ನಗರದ ಬಿ.ಎಚ್. ರಸ್ತೆಯಲ್ಲಿರುವ ವಿಘ್ನೇಶ್ವರ್ ಕಂಫರ್ಟ್ನ ಕೊಠಡಿಯ ಬೀಗ ತೆಗೆದು ಪರಿಶೀಲನೆ ನಡೆಸಿದ್ದು, ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಜೂನ್ನಲ್ಲಿ ಅಬಕಾರಿ ನಿರೀಕ್ಷಕ ಲಿಂಗರಾಜು ಲೋಕಾಯುಕ್ತ ಬಲೆಗೆ ಬಿದಿದ್ದರು. ಅಬಕಾರಿ ಆಯುಕ್ತ ಅರವಿಂದ ಮಂಗಾಣಿ ನಿರ್ದೇಶನದ ಮೇರೆಗೆ ಡಾಬಾ ಮಾಲೀಕರಿಂದ ತಾನು ಲಂಚ ಸ್ವೀಕರಿಸಿದ್ದಾಗಿ ಆತ ಬಾಯಿಬಿಟ್ಟಿದ್ದ. ಅಂದೇ ಅವರ ಬಂಧನಕ್ಕೆ ಲೋಕಾಯುಕ್ತರು ಮುಂದಾಗಿದ್ದರು. ಆದರೆ ಆಯುಕ್ತರು ಕಚೇರಿಗೂ ಬಾರದೆ, ಹೊಟೇಲಿನಲ್ಲಿಯೂ ಇರದೆ ತಲೆ ತಪ್ಪಿಸಿಕೊಂಡಿದ್ದರು. ಲೋಕಾಯುಕ್ತರು ಇವಯ್ಯನನ್ನು ಅಮಾನತು ಮಾಡುವಂತೆ ಶಿಫಾರಸು ಮಾಡಿದ್ದರು.
ಇಂದು ಅರವಿಂದ ಮಂಗಾಣಿಯ ಗುಲ್ಬರ್ಗಾದ ಮನೆಗಳ ಮೇಲೂ ದಾಳಿ ನಡೆಸಿರುವ ಲೋಕಾಯುಕ್ತರು 3 ಕೋಟಿ ರು.ಗೂ ಅಧಿಕ ಆಸ್ತಿಪಾಸ್ತಿ ಪತ್ತೆ ಹಚ್ಚಿದ್ದಾರೆ. ಬೆಳಗ್ಗೆ 6ಕ್ಕೆ ಆರಂಭವಾದ ದಾಳಿ ಮಧ್ಯಾಹ್ನದವರೆಗೂ ನಡೆಯಿತು.
ಮಂಗಾಣೆಯ ಗುಲ್ಬರ್ಗದ ನಿವಾಸ, ಪಾಲಿಕೆ ಎದುರಿನ ಶ್ರೀ ಮೊಬೈಲ್ ಸ್ಟೋರ್ಸ್, ಆಳಂದ ತಾಲ್ಲೂಕು ಕರಹರಿ ಗ್ರಾಮದ ನಿವಾಸ, ಶಹಾಪುರ ಪಟ್ಟಣದಲ್ಲಿನ ಪೆಟ್ರೋಲ್ ಬಂಕ್ ಹಾಗೂ ತುಮಕೂರಿನ ಅವರ ಕಚೇರಿ ಮತ್ತು ವಾಸವಿದ್ದ ಹೋಟೆಲ್ ಮೇಲೆ ಒಟ್ಟು ಐದು ತಂಡಗಳಲ್ಲಿ ದಾಳಿ ನಡೆಸಲಾಗಿದೆ. ದಾಳಿ ಸಂದರ್ಭದಲ್ಲಿ 18 ಗ್ರಾಂ ಚಿನ್ನ, 494 ಗ್ರಾಂ ಬೆಳ್ಳಿ, ರೂ. 54,355 ನಗದು ಹಾಗೂ 9 ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಇವರ ಅಧಿಕೃತ ಆದಾಯ 99 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದ್ದು, ಇನ್ನುಳಿದ 2 ಕೋಟಿ ರೂಪಾಯಿ ಅಕ್ರಮ ಗಳಿಕೆ ಎಂದು ಪರಿಗಣಿಸಲಾಗುವುದು ಎಂದು ಮೂಲಗಳು ಹೇಳಿವೆ. 1975ರ ಜನವರಿಯಲ್ಲಿ ಉದ್ಯೋಗಕ್ಕೆ ಸೇರಿದ ಅರವಿಂದ ಮಂಗಾಣೆ ಗುಲ್ಬರ್ಗ, ರಾಯಚೂರಿನಲ್ಲಿ ಸೇವೆ ಸಲ್ಲಿಸಿದ ಬಳಿಕ 2009ರಿಂದ ತುಮಕೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.












Click it and Unblock the Notifications