ಕಟ್ಟಾಗೆ ಸಿಗಲಿಲ್ಲ ಜಾಮೀನು; ಕಟ್ಟರ್ ನಿಷ್ಠರಿಂದ ದಾಂಧಲೆ

ಬುಧವಾರ 12 ಗಂಟೆ ವೇಳೆಯಲ್ಲಿ ಇವರು ಏನು ಮಾಡಿದ್ದಾರೆಂದರೆ ಸ್ವಾಮಿ ನಿಷ್ಠೆ ತೋರಲು ಪರಪ್ಪನ ಅಗ್ರಹಾರ ಜೈಲಿನೊಳಕ್ಕೆ ಊಟ ಸರಬರಾಜು ಮಾಡುತ್ತಿದ್ದರು. ಇದನ್ನು ಎಂದಿನಂತೆ ಚಿತ್ರೀಕರಿಸಲು ಟಿವಿ ಚಾನೆಲಿನವರು ಮುಂದಾದಾಗ ಐದು ಮಂದಿ ಕಟ್ಟರ್ ನಿಷ್ಠರು ಅವರ ಮೇಲೆ ಮುಗಿಬಿದ್ದಿದ್ದಾರೆ. ಕ್ಯಾಮರಾಗಳನ್ನು ಕಿತ್ತುಕೊಂಡು ದಾಂಧಲೆ ಎಬ್ಬಿಸಿದ್ದಾರೆ. ಜೈಲರ್ ಲಕ್ಷ್ಮಿನಾರಾಯಣ್ ಮಧ್ಯಪ್ರವೇಶಿಸಿ, ಕಟ್ಟಾ ಅಭಿಮಾನಿಗಳನ್ನು ನಿಯಂತ್ರಿಸಿದ್ದಾರೆ.
ಅಪ್ಪ-ಮಗನಿಗೆ ಬೇಲು ಸಿಗದೆ ಜೈಲು: ಇತ್ತ ಜೈಲು ಮುಂದೆ ಕಟ್ಟಾ ಅಭಿಮಾನಿಗಳು ಸುಬ್ರಮಣ್ಯ ನಾಯ್ಡು ಮಾನ ಹರಾಜು ಹಾಕಿದ್ದರೆ ಅತ್ತ ಹೈಕೋರ್ಟಿನಲ್ಲೂ ಸುಬ್ರಮಣ್ಯ ನಾಯ್ಡು ಅಪಜಯ ಅನುಭವಿಸಿದ್ದಾರೆ.
ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಪಟ್ಟಂತೆ ಜೈಲುಪಾಲಾದ ಮರುದಿನವೆ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತವರ ಪುತ್ರ ಕಟ್ಟಾ ಜಗದೀಶ್ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ನಡೆಸಿದ ಎಲ್ಲ ವಿಚಾರಣೆ ಮತ್ತು ತನಿಖೆಗೆ ತಾವು ಸಂಪೂರ್ಣ ಸಹಕಾರ ನೀಡಿದ್ದೇವೆ. ವಿಚಾರಣೆಗೆ ಗೈರು ಹಾಜರಾಗುವುದಾಗಲಿ ಅಥವಾ ವಿಚಾರಣೆಯಿಂದ ತಪ್ಪಿಸಿಕೊಂಡು ಭೂಗತರಾಗುವುದಾಗಲಿ ಮಾಡಲಿಲ್ಲ. ಅಲ್ಲದೆ ವಿಶೇಷ ನ್ಯಾಯಾಲಯದ ಎಲ್ಲ ವಿಚಾರಣೆಗೂ ಹಾಜರಾಗಿದ್ದೇವೆ.
ಈ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನಕ್ಕೆ ಗುರಿ ಮಾಡುವ ಅಗತ್ಯವಿರಲಿಲ್ಲ. ಆದ್ದರಿಂದ ತಮಗೆ ಜಾಮೀನು ನೀಡುವಂತೆ ಕಟ್ಟಾದ್ವಯರು ಹೈಕೋರ್ಟ್ನ್ನು ಕೋರಿದ್ದರು. ಬುಧವಾರ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ವಿಚಾರಣೆಯನ್ನು ಆಗಸ್ಟ್ 18ಕ್ಕೆ ಮುಂದೂಡಿದೆ. ಇದರಿಂದ ಕಟ್ಟಾ ಅಪ್ಪ-ಮಗನಿಗೆ ಬೇಲು ಸಿಗದೆ ಜೈಲು ಮುಂದುವರಿದಿದೆ.
ಇದೇ ವೇಳೆ, ಪ್ರಕರಣದ ಮೂರನೆ ಆರೋಪಿ ಇಟಾಸ್ಕಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಸ್ ವಿ ಶ್ರೀನಿವಾಸ್ ಸಹ ಜಾಮೀನು ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಈ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಿದೆ.












Click it and Unblock the Notifications