ಬಳ್ಳಾರಿ ಗಣಿ ಕಾರ್ಮಿಕರ ಬದುಕು ಮೂರಾಬಟ್ಟೆ

ಕಳೆದ ಶುಕ್ರವಾರ ಗ್ರೀನ್ಬೆಂಚ್ ನೀಡಿದ ಬಳ್ಳಾರಿ ಜಿಲ್ಲೆಯ ಎಲ್ಲಾ ಗಣಿಗಾರಿಕೆ ಸ್ಥಗಿತದ ಆದೇಶದಿಂದ ಜಿಲ್ಲೆಯ ಸ್ಟೀಲ್ ಮತ್ತು ಗಣಿ ಹಾಗೂ ಈ ಉದ್ಯಮಗಳಿಗೆ ಪೂರಕವಾದ ಚಟುವಟಿಕೆಗಳಿಗೆ ಏಕಾಏಕಿ ಗರಬಡಿದಂತಾಗಿತ್ತು. ಮುಂದಿನ ಶುಕ್ರವಾರಕ್ಕೆ ನ್ಯಾಯಾಧೀಶರು ಕಾರ್ಮಿಕರ ಪರವಾಗಿ ನಿರ್ಣಯ ಕೈಗೊಂಡು ಜಿಲ್ಲೆಯ ಆರ್ಥಿಕ ಚಟುವಟಿಕೆಗಳನ್ನು ಕಾಪಾಡಲಿದ್ದಾರೆ ಎನ್ನುವ ನಿರೀಕ್ಷೆ ಅನೇಕರಲ್ಲಿತ್ತು. ಆದರೆ, ಇಂದಿನ ಆದೇಶ ಇಡೀ ವ್ಯವಸ್ಥೆಗೆ ಮತ್ತಷ್ಟು ಆಘಾತ ನೀಡಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಇರುವ ಎನ್ಎಂಡಿಸಿ ಮಾತ್ರವೇ ಗಣಿಗಾರಿಕೆ ನಡೆಸಬೇಕು. ಪ್ರಸ್ತುತ ಜಿಲ್ಲೆಯ ಉಕ್ಕು ಕೈಗಾರಿಕೆಗಳಿಗೆ ಅಗತ್ಯವಿರುವ ಕಬ್ಬಿಣದ ಅದಿರನ್ನು ಪೂರೈಸಲು ಆಗಸ್ಟ್ 8ರಿಂದ ಹೆಚ್ಚುವರಿಯಾಗಿ 1 ಮಿಲಿಯ ಮೆಟ್ರಿಕ್ ಟನ್ ಪ್ರಮಾಣದ ಅದಿರನ್ನು ಉತ್ಪಾದಿಸಿ, ಮಾರಾಟ ಮಾಡಬೇಕು. ಎನ್ಎಂಡಿಸಿ ಕೂಡ ಅದಿರನ್ನು ವಿದೇಶಗಳಿಗೆ ರಫ್ತು ಮಾಡುವಂತಿಲ್ಲ. ಈ ವ್ಯವಸ್ಥೆ 3 ತಿಂಗಳು ಜಾರಿಯಲ್ಲಿ ಇರುತ್ತದೆ.
ಈ ಅವಧಿಯಲ್ಲಿ ಹೊರತೆಗೆಯುವ ಅದಿರಿಗೆ ಶೇ. 10ರಷ್ಟು ಹೆಚ್ಚುವರಿ ರಾಯಲ್ಟಿಯನ್ನು ಮಾರುಕಟ್ಟೆ ಬೆಲೆ ಆಧರಿಸಿ ಕಂಪನಿ ಪಾವತಿ ಮಾಡಬೇಕು. ಈ ಮೂರು ತಿಂಗಳ ಅವಧಿಯ ಸಂಪೂರ್ಣ ವ್ಯವಹಾರವನ್ನು ಎನ್ಎಂಡಿಸಿ ಪ್ರತ್ಯೇಕ ಖಾತೆಯ ಮೂಲಕ ನಿರ್ವಹಿಸಬೇಕು. ಈ ಹಣವನ್ನು ಪರಿಸರ ಸಂರಕ್ಷಣೆ, ಅರಣ್ಯ ಪುನರ್ ನಿರ್ಮಾಣ ಹಾಗೂ ಇನ್ನಿತರೆಗಳಿಗಾಗಿ ಬಳಕೆ ಮಾಡಬೇಕು. ಕರ್ನಾಟಕ ಸರ್ಕಾರ ಮೂರು ತಿಂಗಳ ಒಳಗಾಗಿ ಪರಿಸರ ಸಂರಕ್ಷಣೆ ಕುರಿತು ಸಮಗ್ರ ವರದಿ ಸಲ್ಲಿಸಬೇಕು.
ಕಬ್ಬಿಣದ ಅದಿರು ಕಂಪನಿಗಳು ಮತ್ತು ಉಕ್ಕು ಉದ್ಯಮದ ಹಿತ ಕಾಪಾಡಲು ಇರುವ ಫೆಮಿಯು ಈ ವಿವಾದ ಕುರಿತು ತನ್ನ ಸಲಹೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಮುಕ್ತ ಅವಕಾಶ ಇದೆ. ಇಂಡಿಯನ್ ಕೌನ್ಸಿಲ್ ಫಾರ್ ಫಾರೆಸ್ಟ್ ಅಂಡ್ ವೈಲ್ಡ್ ಲೈಫ್ ಸಂಸ್ಥೆ ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಯ ಪರಿಸರ ಕುರಿತು ಅಧ್ಯಯನ ನಡೆಸಿ ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಬೇಕು ಎಂದು ಆದೇಶ ನೀಡಿದೆ.
ಈಗ ಜಿಲ್ಲೆಯ 120 ಗಣಿ ಕಂಪನಿಗಳಲ್ಲಿಯ ಕಾರ್ಮಿಕರ ಬದುಕು ಬೀದಿಗೆ ಬಂದಂತಾಗಿದೆ. ಜಿಲ್ಲೆಯ ವಾಣಿಜ್ಯ - ವ್ಯವಹಾರ ಚಟುವಟಿಕೆಗಳು ಎಲ್ಲವೂ ಸ್ಥಗಿತಗೊಂಡಿವೆ. ಪರಿಸ್ಥಿತಿ ಹೀಗೇ ಮುಂದುವರೆದಲ್ಲಿ ಜಿಲ್ಲೆಯ ಬಡ, ಮಧ್ಯಮ ವರ್ಗದ ಅನೇಕರ ಬದುಕು ದುಸ್ತರವಾಗಲಿದೆ. ಬೆಲೆ ಏರಿಕೆಗೆ ಸಿಲುಕಿ ನಲುಗುತ್ತಿರುವ ಕಾರ್ಮಿಕರ ಬದುಕು ಸುಧಾರಣೆಗಾಗಿ 3 ತಿಂಗಳು ಕಾಯಬೇಕಿದೆ.












Click it and Unblock the Notifications