ಭುಗಿಲೆದ್ದ ಭಿನ್ನಮತ, ಸಿಡಿದೆದ್ದ ಶೆಟ್ಟರ್ ಬಳಗ

ಡಿವಿ ಸದಾನಂದ ಗೌಡ ಅವರ ಆಯ್ಕೆಯಿಂದ ತೀವ್ರವಾಗಿ ಅಸಮಾಧಾನಗೊಂಡಿರುವ ಶಾಸಕರು ಆ.5ರಂದು ನಡೆಯಲಿರುವ ಮುಖ್ಯಮಂತ್ರಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ನೂತನ ಮಂತ್ರಿಮಂಡಲವನ್ನು ಸೇರಿಕೊಳ್ಳದಿರಲು ನಿರ್ಧರಿಸಿದ್ದಾರೆ.
ಜಗದೀಶ್ ಶೆಟ್ಟರ್ ಜೊತೆ ಅನಂತ್ ಕುಮಾರ್, ಜನಾರ್ದನ ರೆಡ್ಡಿ, ಆರ್ ಅಶೋಕ್, ಅರವಿಂದ್ ಲಿಂಬಾವಳಿ, ಬೆಳ್ಳುಬ್ಬಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಗೋವಿಂದ್ ಕಾರಜೋಳ, ನೆಲಮಂಗಲ ನಾಗರಾಜ್, ಆನಂದ್ ಅಸ್ನೋಟಿಕರ್, ಬಾಲಚಂದ್ರ ಜಾರಕಿಹೊಳಿ ಮುಂತಾದವರು ಮುಂದಿನ ನಡೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ಓಟಿಗಾಗಿ ನೋಟು ಮತ್ತು ವಿಷ : ಮತ ಹಾಕದಿದ್ದರೆ ವಿಷ ಕುಡಿಯುವುದಾಗಿ ಯಡಿಯೂರಪ್ಪನವರು ಬೆದರಿಕೆ ಹಾಕಿದ್ದರೆಂಬ ಸಂಗತಿಯೂ ಬಹಿರಂಗವಾಗಿದೆ. ಮತ ಹಾಕಿದ ಕೆಲ ಶಾಸಕರಿಗೆ ತಲಾ 2 ಕೋಟಿ ರು. ನೀಡಿ ಕೊಂಡುಕೊಳ್ಳಲಾಗಿದೆ ಎಂಬ ಗಂಭೀರ ಆರೋಪವನ್ನೂ ಯಡಿಯೂರಪ್ಪನವರ ವಿರುದ್ಧ ಹೊರಿಸಲಾಗಿದೆ.
ಆಶ್ಚರ್ಯಕರ ಸಂಗತಿಯೆಂದರೆ, ಯಡಿಯೂರಪ್ಪ ವಿರುದ್ಧ ತೊಡೆ ತಟ್ಟಿದ್ದ ಕೆಎಸ್ ಈಶ್ವರಪ್ಪ ತಮ್ಮ ಪ್ಲೇಟನ್ನು ಬದಲಿಸಿದ್ದು, ಡಿವಿ ಸದಾನಂದ ಗೌಡರೊಂದಿಗೆ ಹಸ್ತಲಾಘವ ಮಾಡಿದ್ದಾರೆ. ಯಡಿಯೂರಪ್ಪ ಮೇಲೆ ಪ್ರೀತಿ ಎಂದಿಗೂ ಇರುತ್ತದೆ ಎಂದಿದ್ದ ಜನಾರ್ದನ ರೆಡ್ಡಿ ಈಗ ಮೆತ್ತಗೆ ಶೆಟ್ಟರ್ ಬಳಗ ಸೇರಿದ್ದಾರೆ.
ಜಾರಕಿಹೊಳಿ ಕಿಡಿಮಾತು : ಬಿಜೆಪಿಯಲ್ಲಿ ಭಿನ್ನಮತವಿಲ್ಲ. ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ. ಆದರೆ, ಕೆಲವರು ಸರಿಯಾಗಿ ವರ್ತನೆ ಮಾಡಿಲ್ಲ. ನಮಗೆಲ್ಲ ನೋವಾಗುವಂತೆ ಮಾತನಾಡಿದ್ದಾರೆ. ಇದರ ಬಗ್ಗೆ ಆ.4ರಂದು ಜಗದೀಶ್ ಶೆಟ್ಟರ್ ಮನೆಯಲ್ಲಿ ಮಾತನಾಡಿ ಮುಂದಿನ ನಡೆಗಳ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಬಾಲಚಂದ್ರ ಜಾರಕಿಹೊಳಿ ಸುದ್ದಿಗಾರರಿಗೆ ತಿಳಿಸದರು.












Click it and Unblock the Notifications