ಸದಾಆನಂದ ಬೇಡ್ವೆ ಬೇಡ; ಅನಂತ್- ಅಶೋಕ್ ಒಕ್ಕೊರಲು
ಆದರೆ, ಸದಾನಂದಗೌಡರನ್ನು ಮುಖ್ಯಮಂತ್ರಿಯನ್ನಾಗಿ ಪರಿಗಣಿಸಲು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಚ್. ಎನ್. ಅನಂತಕುಮಾರ್ ಮತ್ತು ಗೃಹ ಸಚಿವ ಆರ್.ಅಶೋಕ್ ಬಲವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಅನಂತಕುಮಾರ್ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಕಾರಣ ಸರಳ. ಸದಾನಂದಗೌಡ ಅವರು ಯಡಿಯೂರಪ್ಪ ಅವರಿಗೆ ತೀರಾ ಆತ್ಮೀಯರು. ರಾಜ್ಯಾಧ್ಯಕ್ಷರಾಗಿದ್ದಾಗ ಯಡಿಯೂರಪ್ಪ ಅವರ ನೆರಳಿನಂತೆಯೇ ನಡೆದುಕೊಂಡರು. ಹೀಗಾಗಿ ಅವರನ್ನು ಮುಖ್ಯಮಂತ್ರಿಯನ್ನಾಗಿಸಿದರೆ ಯಡಿಯೂರಪ್ಪ ಅವರೇ ಪರೋಕ್ಷವಾಗಿ ಆಡಳಿತದ ಮೇಲೆ ಹಿಡಿತ ಸಾಧಿಸುತ್ತಾರೆ ಎಂಬುದು ಅನಂತ್ ಆತಂಕ.
ಆದರೆ, ಸಚಿವ ಅಶೋಕ್ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ವಿಶಿಷ್ಟ ಕಾರಣವೊಂದಿದೆ. ಅದು ಜಾತಿಯದ್ದು. ಅಶೋಕ್ ಮತ್ತು ಸದಾನಂದಗೌಡರಿಬ್ಬರೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಸದಾನಂದಗೌಡರು ಕರಾವಳಿ ಒಕ್ಕಲಿಗರಾದರೆ, ಅಶೋಕ್ ಪಕ್ಕಾ ಹಳೆ ಮೈಸೂರು ಭಾಗದ ಒಕ್ಕಲಿಗರು.
ಸಹಜವಾಗಿಯೇ ಒಕ್ಕಲಿಗ ಸಮುದಾಯದಲ್ಲಿ ಸದಾನಂದಗೌಡರನ್ನು ಇದುವರೆಗೂ ಒಬ್ಬ ಪ್ರಬಲ ನಾಯಕ ಎಂದು ಒಪ್ಪಿಕೊಂಡಿಲ್ಲ. ಜತೆಗೆ ಸದಾನಂದಗೌಡರು ಕೂಡ ತಮ್ಮನ್ನು ಒಕ್ಕಲಿಗ ಸಮುದಾಯದಲ್ಲಿ ಬಲವಾಗಿ ಗುರುತಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ. ಆದರೆ, ಅಶೋಕ್ ಹಾಗಲ್ಲ. ಒಕ್ಕಲಿಗರ ಪ್ರಬಲ ನಾಯಕರೆಂದು ಹೊರಹೊಮ್ಮುವ ಪ್ರಯತ್ನದಲ್ಲಿದ್ದಾರೆ. ಬಿಜೆಪಿಯಲ್ಲಂತೂ ಸದ್ಯಕ್ಕೆ ಒಕ್ಕಲಿಗರ ಮುಂಚೂಣಿ ನಾಯಕರೆಂದು ಗುರುತಿಸಿಕೊಂಡಿದ್ದಾರೆ.
ಈಗೊಂದು ವೇಳೆ ಸದಾನಂದಗೌಡರನ್ನು ಮುಖ್ಯಮಂತ್ರಿಯನ್ನಾಗಿಸಿದರೆ ಒಕ್ಕಲಿಗರಲ್ಲಿ ಬಹುಬೇಗ ಮುಂಚೂಣಿ ನಾಯಕರಾಗಿ ಗುರುತಿಸಲ್ಪಡುವುದರಲ್ಲಿ ಅನುಮಾನವೇ ಇಲ್ಲ. ಇದರಿಂದ ಹೆಚ್ಚು ನಷ್ಟ ಸಂಭವಿಸುವುದು ತಮಗೆ ಎಂದು ಅಶೋಕ್ ಭಾವಿಸಿದ್ದಾರೆ.