ಸೋಮಣ್ಣ ಕೆರೆ ಒತ್ತುವರಿ: ನ್ಯಾ.ಕೇಹರ್ ತೀವ್ರ ತರಾಟೆಗೆ

'ಕೆರೆಯನ್ನು ರಕ್ಷಿಸುವ ಸಂಬಂಧ ಕೋರ್ಟ್ನಿಂದ ಎಷ್ಟೊಂದು ಆದೇಶಗಳನ್ನು ಹೊರಡಿಸಲಾಗುತ್ತಿದೆ. ಕೆರೆ ತನ್ನ ಅಸ್ತಿತ್ವ ಕಳೆದುಕೊಂಡಿದೆ ಎಂಬ ಕಾರಣ ನೀಡಿ ಆ ಜಾಗದಲ್ಲಿ ಕಟ್ಟಡ ನಿರ್ಮಿಸಿರುವುದು ಎಷ್ಟು ಸರಿ' ಎಂದು ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಕೇಹರ್ ನೇತೃತ್ವದ ವಿಭಾಗೀಯ ಪೀಠ ಈ ಕಟ್ಟಡವನ್ನು ನೆಲಸಮ ಮಾಡಲು ಆದೇಶಿಸಬೇಕಾಗುತ್ತದೆ ಎಂದು ಮೌಖಿಕ ಎಚ್ಚರಿಕೆ ನೀಡಿದೆ.
ವಿಚಾರಣೆ ವೇಳೆ ಕೇವಲ ಒಂದು ಎಕರೆ ಜಮೀನು ಮಾತ್ರ ಇದಾಗಿದೆ ಎಂದು ಸರ್ಕಾರದ ಪರ ವಕೀಲರು ಹೇಳಿದ್ದಕ್ಕೆ ಸಿಟ್ಟಿಗೆದ್ದ ನ್ಯಾಯಮೂರ್ತಿಗಳು 'ಕಬ್ಬನ್ ಉದ್ಯಾನ ಈ ಹಿಂದೆ ಹೇಗೆ ಇತ್ತು? ಒಂದು ಎಕರೆ, ಒಂದು ಎಕರೆ ಎಂದು ಹೇಳಿ ಈಗ ಕಾಲು ಭಾಗ ಉದ್ಯಾನ ಕೂಡ ಉಳಿದಿಲ್ಲ. ಎಲ್ಲ ಕೆರೆಗಳನ್ನು ನಾಶ ಮಾಡಿದರೆ ಮುಂದಿನ ಜನಾಂಗಕ್ಕೆ ಏನು ನೀಡುತ್ತೀರಿ' ಎಂದು ಪ್ರಶ್ನಿಸಿದರು.
ಕೆರೆಗಳ ಉಳಿವಿಗೆ ಸಂಬಂಧಿಸಿದಂತೆ ಇತ್ಯರ್ಥವಾಗದೆ ಉಳಿದಿರುವ ಅರ್ಜಿಗಳ ಜತೆ ಇದರ ವಿಚಾರಣೆಯೂ ನಡೆಸುವುದಾಗಿ ತಿಳಿಸಿದ ನ್ಯಾಯಮೂರ್ತಿಗಳು ವಿಚಾರಣೆ ಮುಂದೂಡಿದರು. ಸರ್ವೆ ನಂ. 380ರ ಬಳಿ ಇರುವ 1.18 ಎಕರೆ ಕೆರೆ ದಂಡೆಯನ್ನು ಸೋಮಣ್ಣ ಅಕ್ರಮವಾಗಿ ಪಡೆದು ಶಾಲಾ ಕಟ್ಟಡ ನಿರ್ಮಾಣ ಮಾಡಿದ್ದು, ಅವರ ವಿರುದ್ಧ ಕ್ರಮಕ್ಕೆ ಆದೇಶಿಸುವಂತೆ ಕೋರಿ ನಾರಾಯಣಪ್ಪ ಎನ್ನುವವರು 2009ರಲ್ಲಿ ಸಲ್ಲಿಸಿರುವ ಅರ್ಜಿ ಇದಾಗಿದೆ.












Click it and Unblock the Notifications