'ಹಕ್ಲಾ' ಇಕ್ಬಾಲ್ ಭಟ್ಕಳ್ ಪರೀಕ್ಷೆಯಲ್ಲಿ 18 ಬಾರಿ ಫೇಲಾಗಿದ್ದ
ಮೊದಲ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ ಇಕ್ಬಾಲ್ ಸಹಪಾಠಿಗಳೊಂದಿಗೆ ಸದಾ ಜಗಳ ಮಾಡುತ್ತಿದ್ದ. ಪಾಠ-ಪ್ರವಚನಗಳ ಕಡೆಗೆ ಗಮನ ಕೊಡುತ್ತಿರಲಿಲ್ಲ. ಉಪನ್ಯಾಸಕರಿಗೂ ಕಿರುಕುಳ ನೀಡುತ್ತಿದ್ದ. ಇವನ ಬಿಕ್ಕಲು ತಿಕ್ಕಲು ಸ್ವಭಾವ ನೋಡಿ ಸಹಪಾಠಿಗಳು ಇವನನ್ನು ಹಕ್ಲಾ (ಅಂದರೆ ಉಗ್ಗು, ತೊದಲು) ಎಂದು ಕರೆಯುತ್ತಿದ್ದರು ಎಂದು ಸಹಪಾಠಿಯೊಬ್ಬರು ಹೇಳುತ್ತಾರೆ.
ಕೊನೆಗೆ ಈತ ಶಿಕ್ಷಣವನ್ನು ನಿಲ್ಲಿಸಿ ಇಲ್ಲಿನ ಮಾನಿಷ್ ಮಾರ್ಕೇಟ್ನಲ್ಲಿ ಸುಗಂಧ ದ್ರವ್ಯ ಮಾರಾಟ ಮಾಡುವ ವ್ಯಾಪಾರ ಪ್ರಾರಂಭಿಸಿದ್ದ. ಇವನ ಕಿರಿಯ ಸಹೋದರ ರಿಯಾಜ್ ಭಟ್ಕಳ್ ಉರುಫ್ ರೋಶನ್ ಜಮಾಲ್, ಇಂಡಿಯನ್ ಮುಜಾಹಿದೀನ್ (ಐಎಂ) ಸಂಘಟನೆಯ ಸ್ಥಾಪಕ ಎಂದು ಹೇಳಲಾಗಿದೆ. ಇದೇ ಸಂಘಟನೆ ಮೊನ್ನೆಯ ಮುಂಬೈ ತ್ರಿವಳಿ ಸ್ಫೋಟಕ್ಕೆ ಕಾರಣವೆನ್ನಲಾಗಿದೆ.
ತಲೆಮರೆಸಿಕೊಂಡಿರುವ ಇಬ್ಬರೂ ಸಹೋದರರನ್ನು ಮಹಾರಾಷ್ಟ್ರ ಉಗ್ರ ನಿಗ್ರಹ ಪಡೆ ಪೊಲೀಸರು ಬೇಟೆಯಾಡುತ್ತಿದ್ದಾರೆ. 2006ರ ತನಕ ಇಕ್ಬಾಲ್ ಮತ್ತು ರಿಯಾಜ್ ಕುರ್ಲಾದ ಖಾದಿರ್ ಬಿಲ್ಡಿಂಗ್ನಲ್ಲಿ ವಾಸಿಸುತ್ತಿದ್ದರು. ಈಗ ಫ್ಲಾಟಿಗೆ ಬೀಗ ಹಾಕಲಾಗಿದೆ. ಈ ಬಿಲ್ಡಿಂಗ್ನಲ್ಲಿರುವ ಭಟ್ಕಳ ಸಹೋದರರ ಫ್ಲಾಟಿಗೆ ಪೊಲೀಸರು ಆಗಾಗ ಹಠಾತ್ ಭೇಟಿ ನೀಡುತ್ತಿರುತ್ತಾರೆ. ಅಕ್ಕಪಕ್ಕದ ಫ್ಲಾಟಿನವರಿಗೆ ಪೊಲೀಸರ ಆಗಮನ ಮಾಮೂಲಿಯಾಗಿ ಹೋಗಿದೆ.