ಪೋಸ್ಕೊ ಭೂಸ್ವಾಧೀನ: ರೈತ ಹೋರಾಟಕ್ಕೆ ರಾಹುಲ್ ಸಾಥ್
ರಾಹುಲ್ ಆಪ್ತ ಮೂಲಗಳ ಪ್ರಕಾರ, ರಾಜ್ಯದ ಬಿಜೆಪಿ ಸರ್ಕಾರವು 7,000ಕ್ಕೂ ಹೆಚ್ಚು ಎಕರೆ ಭೂಸ್ವಾಧೀನಕ್ಕೆ ಯತ್ನಿಸುತ್ತಿರುವ ಹಳ್ಳಿಗುಡಿ, ಮೇವುಂಡಿ, ಹಾಗೂ ಜಂತ್ಲಿ-ಶಿರೂರ ಗ್ರಾಮಗಳಿಗೆ ರಾಹುಲ್ ಸದ್ಯದಲ್ಲಿಯೇ ಭೇಟಿ ನೀಡಲಿದ್ದಾರೆ. ಸದ್ಯ ಉತ್ತರ ಪ್ರದೇಶ, ಒರಿಸ್ಸಾ, ಮಧ್ಯಪ್ರದೇಶ ರಾಜ್ಯಗಳ ಪ್ರವಾಸದಲ್ಲಿರುವ ಅವರು, ಈ ತಿಂಗಳ 25ರ ನಂತರ ಗದಗಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ.
'ಗದಗದಲ್ಲಿ ಪೋಸ್ಕೊ ಸ್ಥಾಪಿಸಲು ಉದ್ದೇಶಿಸಿರುವ ಕೈಗಾರಿಕಾ ಘಟಕದ ಬಗ್ಗೆ ಸರ್ಕಾರ ಆ ಕಂಪೆನಿಗೆ ವಿಧಿಸಿರುವ ಷರತ್ತುಗಳು, ಯೋಜನೆಯಿಂದ ಪರಿಸರದ ಮೇಲೆ ಹಾಗೂ ರೈತರ ಜೀವನದ ಮೇಲಾಗುವ ಪರಿಣಾಮಗಳ ಕುರಿತು ಎಐಸಿಸಿ ಮುಖಂಡರು ಮಾಹಿತಿ ಕಲೆಹಾಕುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಮುಖಂಡರು ಸಂಬಂಧಿಸಿದ ಸಂಘಟನೆಗಳೊಡನೆ ಈಗಾಗಲೇ ಸಂಪರ್ಕದಲ್ಲಿದ್ದಾರೆ' ಎಂದು ಅವರು ತಿಳಿಸಿದರು.
'ರೈತರ ಸಮಸ್ಯೆಗಳು ಹಾಗೂ ಭಾರಿ ಕೈಗಾರಿಕೆಗಳಿಂದ ಅವರ ಜೀವನದ ಮೇಲಾಗುತ್ತಿರುವ ಪರಿಣಾಮಗಳ ಕುರಿತು ರಾಹುಲ್ ಕಾಳಜಿ ಹೊಂದಿದಾರೆ. ತಮ್ಮ ಬಿಡುವಿಲ್ಲದ ವೇಳಾಪಟ್ಟಿ ನಡುವೆಯೂ ಅವರು ಖಂಡಿತ ಗದಗಕ್ಕೆ ಭೇಟಿ ನೀಡಲಿದ್ದಾರೆ. ರಾಹುಲ್ ಅವರ ಈ ಭೇಟಿಯಿಂದ, ಒಂದು ಕಾಲದಲ್ಲಿ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ, ಈಗ ಬಿಜೆಪಿ ಹಿಡಿತದಲ್ಲಿರುವ ಗದಗದಲ್ಲಿ ಪಕ್ಷ ಬಲವರ್ಧನೆಗೂ ಇದು ಮಹತ್ವದ ಹೆಜ್ಜೆಯಾಗಲಿದೆ' ಎಂದರು