ಕೇರಳ ಪ್ರಭಾವ ಆಂಧ್ರ ದೇಗುಲದಿ ಅನಂತಾನಂತ ಭಕ್ತರು

ಕರೀಂನಗರ ಜಿಲ್ಲೆಯ ವೆಮುಲವಾಡ ದೇಗುಲದಲ್ಲಿ ಹಬ್ಬ ಹರಿದಿನ ನಡೆದರೆ ಜನ ಸೇರುವುದು ಕಷ್ಟವಾಗಿತ್ತು. ಆದರೆ ಈಗ ಇಲ್ಲಿನ ಪದ್ಮನಾಭ ದೇಗುಲದಲ್ಲಿ ಸದಾ ಜನಜಂಗುಳಿ. ಪದ್ಮನಾಭನ ಪಕ್ಕದಲ್ಲಿರುಅ ರಾಜರಾಜೇಶ್ವರ ಸ್ವಾಮಿ(ಶಿವ)ಯನ್ನು ಕೇಳುವವರಿಲ್ಲ. ಹರಿಹರಕ್ಷೇತ್ರ ಎಂದು ಹೆಸರಾಗಿರುವ ಈ ಊರಿನಲ್ಲೂ ಅನಂತ ಪದ್ಮನಾಭ ಎಂದಿನಂತೆ ಶೇಷಶಯನಶಾಯಿಯಾಗೇ ಭಕ್ತರಿಗೆ ಕಾಣಿಸಿಕೊಳ್ಳುತ್ತಿದ್ದಾನೆ. ಶೈವ, ವೈಷ್ಣವರಿಗೆ ಈ ದೇಗುಲ ಈಗ ಕುತೂಹಲದ ತಾಣವಾಗಿದೆ. ಥ್ಯಾಂಕ್ಸ್ ಟು ಕೇರಳ ಪದ್ಮನಾಭ. [ವೈಭೋಗ ವಿಡಿಯೋ ನೋಡಿ]
ಗುಂಟೂರಿನ ಉಂಡವಳ್ಳಿ ಅನಂತ ಪದ್ಮನಾಭ ದೇಗುಲದ್ದೂ ಅದೇ ಕಥೆ. ಇಲ್ಲಿ ಜನ ಜಂಗುಳಿ ನಿಯಂತ್ರಣಕ್ಕಿಂತ, ಕಳ್ಳಕಾಕರ ಭಯ ಹೆಚ್ಚಾಗಿದೆ. ಇಲ್ಲಿನ ಇತಿಹಾಸ ಪ್ರಸಿದ್ಧ ಗುಹಾಂತರ ದೇಗುಲಕ್ಕೆ ಕನ್ನ ಹಾಕುವ ಚೋರರಿಗೆ ಆಗಲೇ ಇಲ್ಲಿ ಕೂಡಾ ನಿಧಿ ಇರುವ ಬಗ್ಗೆ ಸುಳಿವು ಸಿಕ್ಕಿದೆ ಎಂಬ ಸುದ್ದಿ ಹಬ್ಬಿದೆ.
ಚಾಲುಕ್ಯರ ಕಾಲದ ನಾಲ್ಕು ಅಂತಸ್ತಿನ ಸುಂದರ ದೇಗುಲದಲ್ಲಿ ಯಾವುದೇ ನಿಧಿ ಇಲ್ಲ ಎಂದು ಪುರಾತತ್ತ್ವ ಇಲಾಖೆಯ ಪಿ ರಾಮಲಕ್ಷ್ಮಿ ಹೇಳಿದ್ದಾರೆ. ಆದರೆ, ಅನಂತ ಪದ್ಮನಾಭನ ಸನ್ನಿಧಿಯಲ್ಲಿ ಅನಂತ ನಿಧಿ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಬೆಳೆದುಬಿಟ್ಟಿದೆ. ಇದರಿಂದ ಇಲ್ಲಿನ ವಿಗ್ರಹಕ್ಕೆ, ಐತಿಹಾಸಿಕ ಕಟ್ಟಡಗಳಿಗೆ ಹಾನಿಯಾಗುವ ಸಂಭವವಿದ್ದು, ಸೂಕ್ತ ಭದ್ರತೆಯ ಅವಶ್ಯಕತೆ ಇದೆ ಎಂದು ರಾಮಲಕ್ಷ್ಮಿ ಹೇಳಿದ್ದಾರೆ.











Click it and Unblock the Notifications