ಕುಮಾರಸ್ವಾಮಿ ಉಪವಾಸಕ್ಕೆ ಬಳ್ಳಾರಿಯಲ್ಲಿ ಸ್ಪಂದನ

ಜಿಲ್ಲಾ ಜೆಡಿಎಸ್ ಅಧ್ಯಕ್ಷ, ಮಾಜಿ ಶಾಸಕ ಎನ್. ಸೂರ್ಯನಾರಾಯಣರೆಡ್ಡಿ ಅವರು ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿ, ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಸೇರಿ ಅವರ ಕುಟುಂಬದ ಎಲ್ಲಾ ಸದಸ್ಯರ ವಿರುದ್ಧ ಅಕ್ರಮ ಆಸ್ತಿಗಳಿಕೆ ಮತ್ತು ಇನ್ನಿತರೆ ಆರೋಪಗಳ ಮೂಲಕ ಬಿಜೆಪಿ ಮತ್ತು ಯಡಿಯೂರಪ್ಪ ಅವರು, ದೇವೇಗೌಡರ ಕುಟುಂಬಕ್ಕೆ ಕಳಂಕ ಅಂಟಿಸಿದ್ದಾರೆ ಎಂದರು.
ಈ ಆರೋಪ ರಾಜಕೀಯ ಆರೋಪವಾಗಿಲ್ಲ. ಕುಟುಂಬದ ವರ್ಚಸ್ಸು - ಗೌರವ; ಪ್ರತಿಷ್ಠೆಗಳಿಗೆ ಸಂಬಂಧಿಸದ್ದಾಗಿದೆ. ಅಲ್ಲದೇ, ಮುಂದಿನ ಪೀಳಿಗೆ ಕೂಡ ಈ ವಿಚಾರವನ್ನು ಪದೇ ಪದೇ ಪ್ರಸ್ತಾಪಿಸಿ ಇಡೀ ಕುಟುಂಬವನ್ನು ಗೇಲಿ ಮಾಡುವ, ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳಿವೆ. ಕಾರಣ ಈ ಕುಟುಂಬ ಈ ಆರೋಪದ ಕಳಂಕದಿಂದ ಮುಕ್ತವಾಗಲು ಬಿಜೆಪಿ ಮಾಡಿರುವ ಎಲ್ಲಾ ಆರೋಪಗಳ ತನಿಖೆ ನಡೆಯಬೇಕು ಎಂದರು.
ನಿವೃತ್ತ ಐಎಎಸ್ ಅಧಿಕಾರಿ, ದಕ್ಷತೆ, ಪ್ರಮಾಣಿಕತೆಗೆ ಖ್ಯಾತರಾಗಿರುವ ಬಾಲಸುಬ್ರಮಣಿಯನ್ ನೇತೃತ್ವದ ಟಾಸ್ಕ್ಪೋರ್ಸ್ ಸಲ್ಲಿಸಿರುವ ಭೂ ಒತ್ತುವರಿ ಪ್ರಕರಣವನ್ನು ಸರ್ಕಾರ ಕೂಡಲೇ ತನಿಖೆಗೆ ಒಳಪಡಿಸಲಿ. ಈ ಟಾಸ್ಕ್ಫೋರ್ಸ್ನ ವರದಿಯ ತನಿಖೆ ಪ್ರಾರಂಭವಾದಲ್ಲಿ ಸರ್ಕಾರದ ಬಂಡವಾಳ ಬಯಲಾಗಲಿದೆ ಎಂದು ಅವರು ಭವಿಷ್ಯ ನುಡಿದರು.
ಜಿಲ್ಲಾ ಜೆಡಿಎಸ್ ಕಚೇರಿಯಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿಯನ್ನು ತಲುಪಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿದರು.












Click it and Unblock the Notifications