ಈಶ್ವರಪ್ಪ ಆಣೆ ಮಾಡಲಿ: ದೊಡ್ಡ ಗೌಡರ ಹೊಸ ಛಾಲೆಂಜ್
ಆದರೆ ಒಂದು ಸಲಹೆ: ಶೃಂಗೇರಿ ಸ್ವಾಮೀಜಿಗಳ ಬಗ್ಗೆ ಮಾತ್ರವೇ ತನಗೆ ನಂಬಿಕೆ ಇರುವುದಾಗಿ ಇತ್ತೀಚೆಗೆ ದೊಡ್ಡ ಗೌಡರು ಘೋಷಿಸಿಕೊಂಡಿದ್ದಾರೆ. ಆದ್ದರಿಂದ ಶೃಂಗೇರಿಯಲ್ಲಿ ಮುಂದಿನ ಆಣೆ ಪ್ರಮಾಣ ಪ್ರಹಸನವನ್ನು ರಾಝ್ಯದ ಜನತೆ ನೋಡುವಂತಾಗಲಿ.
ವಿಷಯ ಏನೆಂದರೆ ಮೂರು ತಿಂಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಬಿ.ಎಸ್. ಯಡಿಯೂರಪ್ಪ ಅವರನ್ನು ಮುಗಿಸುವವರೆಗೂ ನಿದ್ದೆ ಮಾಡುವುದಿಲ್ಲ ಎಂದು ದೊಡ್ಡ ಗೌಡರ ಬಳಿ ಹೇಳಿದ್ದರಂತೆ.
ಈಗ ಯಡಿಯೂರಪ್ಪ ಕಡೆಯಿಂದ ವಸೂಲಿ ಚೆನ್ನಾಗಿದೆ ಎಂದು ಈಶ್ವರಪ್ಪ ಅವರ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿರುವ ಗೌಡರು, ಬೇಕಿದ್ದರೆ ಈ ನನ್ನ ಮಾತು ಸುಳ್ಳು ಎಂದು ಈಶ್ವರಪ್ಪ ಆಣೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಇಂಚಿಂಚೂ ಜಾಗವನ್ನು ಈಶ್ವರಪ್ಪ ಹಾಗೂ ಯಡಿಯೂರಪ್ಪ ಕಬಳಿಸುತ್ತಿದ್ದಾರೆ. ಇವರು ಉಳಿಸಿದ ಜಾಗವನ್ನು ಮತ್ತೂಬ್ಬ ನಾಯಕ ಡಿ.ಎಚ್. ಶಂಕರಮೂರ್ತಿ ಖರೀದಿಸುತ್ತಿದ್ದಾರೆ. ಇಂಧನ ಸಚಿವರಾದ ಶೋಭಾ ಕರಂದ್ಲಾಜೆ ಹಾಗೂ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರ ಈಗಿನ ಆಸ್ತಿ ಹಾಗೂ ಅಧಿಕಾರಕ್ಕೆ ಬರುವ ಮೊದಲಿನ ಆಸ್ತಿ ಬಗ್ಗೆಯೂ ತನಿಖೆ ನಡೆಯಲಿ ಎಂದು ಹೇಳಿದರು.
ಬಿಜೆಪಿ ಪ್ರಕಟಿಸಿರುವ ಚಾರ್ಜ್ಶೀಟ್ನಲ್ಲಿ ಯಾರದೋ ಮನೆಯನ್ನು ನನ್ನ ಮನೆಯೆಂದು ಪ್ರಕಟಿಸಲಾಗಿದೆ. ಇಡೀ ಪುಸ್ತಕದಲ್ಲಿ ಸುಳ್ಳುಗಳ ಕಂತೆಯನ್ನು ಪೋಣಿಸಲಾಗಿದೆ. ಹಿಂದೆ ದೇವೇಗೌಡರ ವಿರುದ್ಧ ಬಿಜೆಪಿ ನಾಯಕರಾಗಿದ್ದ ವೆಂಕಟಗಿರಿ ಗೌಡರು ಪುಸ್ತಕ ಬರೆದಿದ್ದರು. ಈಗ ಈ ಯಡಿಯೂರಪ್ಪ ಹಾಗೂ ಈಶ್ವರಪ್ಪ ಸುಳ್ಳು ಆರೋಪಗಳ ಸರಮಾಲೆಯನ್ನೇ ಹೇಳುತ್ತಿದ್ದಾರೆ ಎಂದರು.