ಚಾರ್ಜ್ ಶೀಟ್ ವಿರುದ್ಧ ಕುಮಾರಸ್ವಾಮಿ ಉಪವಾಸ ಸತ್ಯಾಗ್ರಹ
ಅಕ್ರಮ ಆಸ್ತಿಗೆ ಸಂಬಂಧಿಸಿಂತೆ ಇನ್ನೊಂದು ವಾರದೊಳಗೆ ತನಿಖೆಗೆ ಆದೇಶಿಸಿ. ಮೂರು ತಿಂಗಳೊಳಗೆ ತನಿಖಾ ವರದಿ ಒಪ್ಪಿಸಿ ಸತ್ಯಾಸತ್ಯತೆ ಇತ್ಯರ್ಥ ಮಾಡದಿದ್ದರೆ, ವಿಧಾನಸೌಧದ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಹೂಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಗಡುವು ನೀಡಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಆಣೆ ಪ್ರಮಾಣ ಮಾಡದೆ ಯಡಿಯೂರಪ್ಪ ಪಲಾಯನ ಮಾಡಿದ್ದಾರೆ. ರಾಮನ ಹೆಸರು ಹೇಳಿಕೊಂಡು ಆರು ವರ್ಷ ಅಧಿಕಾರ ಮಾಡಿದ್ದು ಪಾಪ ಗಡ್ಕರಿ ಮರೆತಿದ್ದಾರೆ. ಈಗ ರಾಮನನ್ನು ಕಾಡಿಗೆ ಅಟ್ಟಿದ್ದಾರೆ. ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ಈಗ ಉಪದೇಶ ಮಾಡುತ್ತಾರೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ನಾನು ಈಗಾಗಲೇ ಹಲವು ಬಾರಿ ಮುಖ್ಯಮಂತ್ರಿ ವಿರುದ್ಧ ಹಲವು ಆರೋಪ ಮಾಡಿ, ದಾಖಲೆ ಬಿಡುಗಡೆ ಮಾಡಿರುವೆ. ಆದರೆ ಮುಖ್ಯಮಂತ್ರಿಗಳಿಂದ ಸ್ಪಷ್ಟನೆ ಸಿಕ್ಕಿಲ್ಲ. ಬಿಜೆಪಿ ಬಿಡುಗಡೆ ಮಾಡಿರುವ ಚಾರ್ಜ್ಶೀಟ್ನ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಮ್ಮ ಕುಟುಂಬದ ವಿರುದ್ದ ಮಾಡಿರುವ 1500 ಕೋಟಿ ರು.ಗಳ ಆರೋಪದ ಬಗ್ಗೆ ಸಮಗ್ರ ತನಿಖೆ ಆಗಲಿ, ಸತ್ಯಾಸತ್ಯತೆ ಹೊರಬರಲಿ. ಇಲ್ಲದೆ ಹೋದಲ್ಲಿ ಮುಂದೆ ಆಗುವ ಅನಾಹುತಕ್ಕೆ ಸರ್ಕಾರವೇ ಹೊಣೆ ಎಂದು ಕುಮಾರಸ್ವಾಮಿ ಗುಡುಗಿದರು.
ಯಡಿಯೂರಪ್ಪ ಧೈರ್ಯವಾಗಿ ಮುಂದೆ ಬಂದು ಸಮರ ಮಾಡದೆ, ಕೆಲವು ಸರ್ಕಾರಿ ವಿದೂಷಕರನ್ನು ಬಳಸಿ ತಪ್ಪು ಮಾಹಿತಿಯುಳ್ಳ ಚಾರ್ಜ್ ಶೀಟ್ ತಯಾರಿಸಲು ತುಂಬಾ ಶ್ರಮ ಪಟ್ಟಿದ್ದಾರೆ. ನಮ್ಮ ಕುಟುಂಬದ ಹೆಸರಿನಲ್ಲಿ ಇಲ್ಲದ ಆಸ್ತಿಪಾಸ್ತಿ ವಿವರಗಳನ್ನು ಸೇರಿಸಿದ್ದಾರೆ. ಬಿಜೆಪಿ ನಾಯಕರಿಗೆ ನೈತಿಕತೆ, ಧೈರ್ಯ, ತಾಕತ್ತಿದ್ದರೆ, ಪ್ರಾಮಾಣಿಕತೆ ಇದ್ದರೆ ತನಿಖೆ ನಡೆಸಲಿ ಎಂದು ಕುಮಾರಸ್ವಾಮಿ ಸವಾಲೆಸೆದಿದ್ದಾರೆ.