ರೆಡ್ಡಿಗೆ ವಾರಂಟ್ ಜಾರಿ ಮಾಡದ ಪೊಲೀಸ್ ಅಮಾನತು

ಜಿಲ್ಲಾ ಉಸ್ತುವಾರಿ ಸಚಿವ ಜಿ. ಜನಾರ್ದನ ರೆಡ್ಡಿ ಅವರಿಗೆ ಸಂಡೂರು ನ್ಯಾಯಾಲಯ ಜಾರಿ ಮಾಡಿದ್ದ ಅರೆಸ್ಟ್ ವಾರಂಟ್ ತಲುಪಿಸದೆ ಕರ್ತವ್ಯಲೋಪ ಎಸಗಿದ ಕಾರಣ ಪೊಲೀಸ್ ಇಲಾಖೆಯ ಮೂವರನ್ನು ಸೇವೆಯಿಂದ ಅಮಾನತು ಮಾಡಿ ಪೊಲೀಸ್ ವರಿಷ್ಠಾಧಿಕಾರಿಗಳು ಆದೇಶಿಸಿದ್ದಾರೆ.
ಸಂಡೂರು ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದ ರಮಾಕಾಂತ್, ತೋರಣಗಲ್ಲು ಪೊಲೀಸ್ ಠಾಣೆಯ ಪಿಎಸ್ಸೈ ಉಮೇಶ್ (ಈ ಇಬ್ಬರು ಪ್ರಸ್ತುತ ವರ್ಗಾವಣೆ ಆಗಿದ್ದು, ಜಿಲ್ಲೆಯ ಹೊರಗಿನ ಠಾಣೆಗಳಲ್ಲಿ ಸೇವೆಯಲ್ಲಿದ್ದಾರೆ) ಮತ್ತು ತೋರಣಗಲ್ಲು ಪೊಲೀಸ್ ಠಾಣೆಯ ಪೇದೆ ಸೂರ್ಯನಾರಾಯಣ ಅಮಾನತಾದ ಸಿಬ್ಬಂದಿ.
ಹಿನ್ನೆಲೆ : ಗಣಿ ಗುತ್ತಿಗೆದಾರ ಟಪಾಲ್ ಗಣೇಶ್ ಅವರು ತುಮಟಿ ಪ್ರದೇಶದಲ್ಲಿಯ ತಮ್ಮ ಗಣಿಯ ಗಡಿ ಕಲ್ಲುಗಳನ್ನು ಧ್ವಂಸ ಮಾಡಿದ್ದು ಮತ್ತು ಗಣಿ ಪ್ರದೇಶವನ್ನು ಅತಿಕ್ರಮ ಮಾಡಿರುವ ಕುರಿತು 2006ರಲ್ಲಿ ಸಂಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ದೂರಿನ ಕುರಿತು ಸಂಡೂರು ನ್ಯಾಯಾಲಯ ಜನಾರ್ದನ ರೆಡ್ಡಿ ಅವರಿಗೆ 11 ಬಾರಿ ಬಂಧಿಸಲು ವಾರಂಟ್ ಜಾರಿ ಮಾಡಿತ್ತು. ಒಮ್ಮೆಯೂ ಕೂಡ ವಾರೆಂಟ್ ಸಚಿವರು ಅಥವಾ ಆಪ್ತ ಸಹಾಯಕರನ್ನು ತಲುಪಿರಲಿಲ್ಲ. ಆದರೆ, ಪದೇ ಪದೇ ಈ ವಿಷಯ ಮಾಧ್ಯಮಗಳಲ್ಲಿ ತೀವ್ರ ಕುತೂಹಲ ಕೆರಳಿಸಿ, ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿತ್ತು.
ವಿವಾದ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಮೇಲೆ ಪ್ರಕರಣ ತೀವ್ರ ರಾಜಕೀಯ ಸ್ವರೂಪ ಪಡೆದು, ವಾರಂಟ್ 11 ಬಾರಿ ನೀಡಲಾಗಿದ್ದರೂ ಪದೇ ಪದೇ ಕೋರ್ಟ್ಗೆ ಸಚಿವರು ಗೈರುಹಾಜರಿ ಆಗುತ್ತಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿತ್ತು. ನ್ಯಾಯಾಲಯ ಜಿಲ್ಲಾ ಪೊಲೀಸ್ ವ್ಯವಸ್ಥೆ ಮತ್ತು ಗೃಹ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ವಾರೆಂಟ್ ಜಾರಿ ಆಗುವಲ್ಲಿ ಕರ್ತವ್ಯಲೋಪ ಎಸಗಿರುವ ಹಿಂದಿನ ಉದ್ದೇಶವನ್ನು ತಿಳಿಯಲು ಹಿರಿಯ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಿದ್ದರು.
ಸಿಪಿಐ ರಮಾಕಾಂತ್ ಮತ್ತು ಪಿಎಸೈ ಉಮೇಶ್ ಅವರ ಅಮಾನತು ಆದೇಶ ಬೆಂಗಳೂರಿನಿಂದಲೇ ಜಾರಿ ಆಗಿದೆ. ಪೇದೆ ಸೂರ್ಯನಾರಾಯಣ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ಅವರು ಅಮಾನತುಗೊಳಿಸಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ಅವರು ಮಾತನಾಡಿ, ಪೊಲೀಸ್ ಪೇದೆ ಸೂರ್ಯನಾರಾಯಣ ಅವರನ್ನು ಮಾತ್ರ ತಾವು ಸಚಿವರಿಗೆ ವಾರೆಂಟ್ ತಲುಪಿದ ಕಾರಣ ನೀಡಿ ಕರ್ತವ್ಯಲೋಪಕ್ಕಾಗಿ ಸೇವೆಯಿಂದ ಅಮಾನತು ಮಾಡಲಾಗಿದೆ. ಉಳಿದ ಇಬ್ಬರ ಅಮಾನತು ಆದೇಶವನ್ನು ಜಾರಿ ಮಾಡಿದವರ್ಯಾರು? ಎಂದು ತಿಳಿದಿಲ್ಲ ಎಂದರು.











Click it and Unblock the Notifications