ಇಲಾಖೆಗಳ ಮಧ್ಯೆ ಜಟಾಪಟಿ: 'ನಮ್ಮ ಮೆಟ್ರೊ' ಕಾಮಗಾರಿ ಸ್ಥಗಿತ
ಪ್ರಸ್ತುತ, ಒಟ್ಟು ಮೂರು ಕಡೆ (ಪ್ಲಾಟ್ಫಾರಂ ರಸ್ತೆ, ಅಯ್ಯಪ್ಪಸ್ವಾಮಿ ದೇವಾಲಯ ಮತ್ತು ರೈಲ್ವೆ ಇಲಾಖೆ ನೌಕರರ ವಸತಿಗೃಹಗಳು) ಮೆಟ್ರೊ ನೆಲದಡಿಯ ನಿಲ್ದಾಣ ಮತ್ತು ಸುರಂಗ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಈ ಮೂರನ್ನೂ ತಡೆಹಿಡಿಯುವಂತೆ ಇಲಾಖೆ ಸೂಚನೆ ನೀಡಿದೆ.
ಮುಖ್ಯವಾಗಿ, ತನ್ನ ಜತೆಗಿನ ಒಪ್ಪಂದದಂತೆ ಮೆಟ್ರೊ ಕಾಮಗಾರಿ ನಡೆಸುತ್ತಿಲ್ಲ ಎಂಬುದು ಇಲಾಖೆಯ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಮೆಟ್ರೊ ನಿಗಮದವರು ರೈಲ್ವೆ ವಸತಿ ಗೃಹಗಳಿಗೆ ಸೂಕ್ತ ಭದ್ರತೆ ಒದಗಿಸಿಲ್ಲ. ಕಾಮಗಾರಿ ಕೈಗೊಂಡಿರುವ ಸುತ್ತಮುತ್ತಲ ಜಾಗದಲ್ಲಿ ರಸ್ತೆ ಮತ್ತು ಚರಂಡಿಗಳ ದುರಸ್ತಿ ಕಾರ್ಯ ಕೈಗೊಂಡಿಲ್ಲ.
'ರೈಲ್ವೆ ಜಾಗ ಬಳಸಿಕೊಳ್ಳಲು ಪರವಾನಗಿ ಶುಲ್ಕವಾಗಿ 98 ಕೋಟಿ ರುಪಾಯಿ ಪಾವತಿ ಮಾಡಲಾಗಿದೆ. 14 ಕೋಟಿ ರುಪಾಯಿ ವೆಚ್ಚದಲ್ಲಿ ರೈಲ್ವೆ ನೌಕರರಿಗೆ ವಸತಿ ಗೃಹಗಳನ್ನು ನಿರ್ಮಿಸಿಕೊಡಲಾಗಿದೆ. ಅಂತರರಾಷ್ಟ್ರೀಯ ಮಟ್ಟದ ಭದ್ರತಾ ವ್ಯವಸ್ಥೆಯನ್ನು ಒದಗಿಸಲಾಗಿದೆ. ಆದರೂ ತಕರಾರು ಎತ್ತುತ್ತಿರುವುದು ಸರಿಯಲ್ಲ' ಎಂದು ಮೆಟ್ರೊ ರೈಲು ನಿಗಮದ ವಕ್ತಾರ ಬಿ.ಎಲ್.ವೈ.ಚವಾಣ್ ಪ್ರತಿಕ್ರಿಯಿಸಿದ್ದಾರೆ.
ಎರಡೂ ಇಲಾಖೆಗಳ ಜಟಾಪಟಿ ನಡುವೆಯೂ ಪ್ರಮಾಣ ಪತ್ರ ಪಡೆದ ಬಳಿಕ, ಅಂದರೆ ಆಗಸ್ಟ್ ತಿಂಗಳಲ್ಲಿ ರೀಚ್- 1ರಲ್ಲಿ ಮೆಟ್ರೊ ರೈಲು ಗಾಡಿಯ ಸಾರ್ವಜನಿಕ ಸಂಚಾರ ವಿಧ್ಯುಕ್ತವಾಗಿ ಆರಂಭವಾಗುವ ಸಾಧ್ಯತೆ ಇದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.