ಜಯಲಲಿತಾ ಕಿವಿಯಲ್ಲಿ ಶೀಲಾ ದೀಕ್ಷಿತ್ ಹೇಳಿದ್ದೇನು !?
ಈ ಹಿನ್ನೆಲೆಯಲ್ಲಿ, ತಮಿಳುನಾಡು ಮುಖ್ಯಮಂತ್ರಿ ಜಯಾ ಜತೆ ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಸೋಮವಾರ ಮಾತುಕತೆ ನಡೆಸಿದರು. ಯುಪಿಎ ಅಧಿನಾಯಕಿ ಸೋನಿಯಾ ಗಾಂಧಿ ರಾಜಧಾನಿಯಿಂದ ಹೊರಗಿರುವುದರಿಂದ ಜಯಾ ಆತಿಥ್ಯವನ್ನು ಶೀಲಾ ಅವರೇ ನೋಡಿಕೊಳ್ಳುತ್ತಿದ್ದಾರೆ.
ಮೇಡಂ ಬರುವವರೆಗೂ ಅನುಕ್ಷಣವೂ ಜಯಾ ಅವರನ್ನು ಶೀಲಾ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಸೋನಿಯಾ ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ಶೀಲಾ ಮಧ್ಯೆ ಮಧ್ಯೆ, ಸೋನಿಯಾರ ರಾಜಕೀಯ ಸಂದೇಶಗಳನ್ನು ಜಯಲಲಿತಾ ಕಿವಿಗೆ ಹಾಕುತ್ತಿದ್ದಾರೆ. ಯುಪಿಎ ಮತ್ತು ಅಣ್ಣಾ ಡಿಎಂಕೆ ಸಂಭವನೀಯ ಮೈತ್ರಿ ಬಗ್ಗೆ ಮಂಗಳವಾರ ಅಧಿಕೃತ ಘೋಷಣೆ ಹೊರಬೀಳಬಹುದು ಎಂದು ನಿರೀಕ್ಷಿಸಲಾಗಿದೆ.
ಜಯಲಲಿತಾ ಮಂಗಳವಾರ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಕಂಡು ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕುರಿತು ಚರ್ಚಿಸಲಿದ್ದಾರೆ. ಹಣಕಾಸು ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು, ಇದನ್ನು ಸರಿದಾರಿಗೆ ತರಲು ಕೇಂದ್ರದ ನೆರವು ಕೋರಿ ಮನವಿ ಸಲ್ಲಿಸಲಿದ್ದಾರೆ. ಬಳಿಕ ಯೋಜನಾ ಆಯೋಗದ ಉಪಾಧ್ಯಕ್ಷ ಡಾ. ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರನ್ನು ಭೇಟಿ ಮಾಡುವರು.
ಪ್ರಧಾನಿ ಅವರನ್ನು ಜಯಾ ಭೇಟಿ ಮಾಡುತ್ತಿರುವುದಕ್ಕೆ ವಿಶೇಷ ಅರ್ಥವಿಲ್ಲ ಎಂದು ಹೇಳಲಾಗುತ್ತಿದ್ದರೂ ಮಾತುಕತೆ ವೇಳೆ ರಾಜಕೀಯ ಬೆಳವಣಿಗೆ ಕುರಿತು ಪ್ರಸ್ತಾಪವಾಗಬಹುದು ಎಂದು ನಿರೀಕ್ಷಿಸಲಾಗಿದೆ. ತಮಿಳುನಾಡು ಮತ್ತು ಪುದುಚೇರಿ ಚುನಾವಣೆ ಸೋಲಿಗೆ ಕಾಂಗ್ರೆಸ್ ಮತ್ತು ಡಿಎಂಕೆ ಪರಸ್ಪರರ ವಿರುದ್ಧ ದೂಷಣೆ ಮಾಡುತ್ತಿವೆ. ಸೋಲಿಗೆ 2ಜಿ ಹಗರಣ ಕಾರಣ ಎಂದು ಕಾಂಗ್ರೆಸ್ ಈಗಾಗಲೇ ಹೇಳಿದೆ.