ಪೊಲಾರ್ಡ್ ಮಾರ್ಟಿನ್ ತಾಳಕ್ಕೆ ಕುಣಿದ ಟೀಂ ಇಂಡಿಯಾ

250 ರನ್ ಗಳಿಸಲಾಗದೆ 39 ಓವರ್ ಗಳಲ್ಲಿ 146ರನ್ ಗಳಿಸಿ ಆಲೌಟ್ ಆಗಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಇದಕ್ಕೆ ಅತಿಯಾದ ಆತ್ಮವಿಶ್ವಾಸ, ಜವಾಬ್ದಾರಿ ರಹಿತ ಬ್ಯಾಟ್ಸ್ ಮನ್ ಗಳು ಹೊಣೆ ಎನ್ನಬಹುದು. ಜೊತೆಗೆ ಸರಣಿ ಪ್ರಥಮ ಬಾರಿಗೆ ಸಂಘಟಿತ ಹೋರಾಟ ಪ್ರದರ್ಶಿಸಿದ ವಿಂಡೀಸ್ ಅರ್ಹ ಜಯ ಸಂಪಾದಿಸಿದೆ. ಅಂಥೋನಿ ಮಾರ್ಟಿನ್ 4 ವಿಕೆಟ್, ಆಂಡ್ರೆ ರಸೆಲ್ 3 ಹಾಗೂ ನಾಯಕ ಸಮ್ಮಿಗೆ 2 ವಿಕೆಟ್ ಪಡೆದು ಬಲಿಷ್ಠ ಬ್ಯಾಟಿಂಗ್ ಪಡೆ ಎಂದು ಬೀಗುತ್ತಿದ್ದ ಟೀಂ ಇಂಡಿಯಾಗೆ ಎಚ್ಚರಿಕೆ ಸಂದೇಶ ಕಳಿಸಿದ್ದಾರೆ.
ಭಾರತದ ಪರ ರೋಹಿತ್ ಶರ್ಮ 39 ರನ್, ಪಾರ್ಥೀವ್ ಪಟೇಲ್ 26 ಹಾಗೂ ಕೊಹ್ಲಿ 22ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಪೆವಿಲಿಯನ್ ಪೆರೇಡ್ ನಡೆಸಿದರು. ಆದರೆ, ಇದಕ್ಕೂ ಮುನ್ನ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತದ ನಾಯಕ ಸುರೇಶ್ ರೈನಾರ ನಿರ್ಧಾರ ಸರಿಯಾಗೇ ಇತ್ತು. ಇಶಾಂತ್ ಶರ್ಮ ಹಾಗೂ ಪ್ರವೀಣ್ ಬೌಲಿಂಗ್ ಮೋಡಿಗೆ ಸಿಲುಕಿದ ವಿಂಡೀಸ್ ಆಟಗಾರರು ಒಬ್ಬೊಬ್ಬರಾಗಿ ವಿಕೆಟ್ ಒಪ್ಪಿಸತೊಡಗಿದರು.
ಸಿಮನ್ಸ್ 67 ರನ್ ಹಾಗೂ ಪೊಲ್ಲಾರ್ಡ್ 70 ರನ್ ಗಳಿಸಿ ತಂಡದ ಮೊತ್ತವನ್ನು 249 ರನ್ ಗೆ ಹೆಚ್ಚಿಸಿದ್ದು ಸಾರ್ಥಕವಾಯಿತು. ಸ್ಪಿನ್ ಮಾಂತ್ರಿಕ ಅಮಿತ್ ಮಿಶ್ರಾ ಸ್ವಲ್ಪ ದುಬಾರಿಯಾದರೂ 2 ವಿಕೆಟ್ ಪಡೆದರು. ಅಶ್ವಿನ್ ಯಾವುದೇ ಜಾದು ಮಾಡಲಿಲ್ಲ. ವಿನಯ್ ಕುಮಾರ್ ಮತ್ತೆ ಅವಕಾಶ ವಂಚಿತರಾದರು. ಮನೋಜ್ ತಿವಾರಿ ಉತ್ತಮ ಆಟ ಪ್ರದರ್ಶಿಸಲು ವಿಫಲರಾದರು. ಮೈಮರೆತು ಆಟವಾಡಿದ ಭಾರತಕ್ಕೆ ಮತ್ತೊಮ್ಮೆ ಚುರುಕು ಮುಟ್ಟಿಸಲು ವಿಂಡೀಸ್ ಆಟಗಾರರು ಸಿದ್ಧತೆ ನಡೆಸಿದ್ದಾರೆ.












Click it and Unblock the Notifications