ದೇವರಚಿಕ್ಕನಹಳ್ಳಿ ಸಂಜೀವರಾಯ ದೇವಸ್ಥಾನದಲ್ಲಿ ಕಳವು
ದೇವರಚಿಕ್ಕನಹಳ್ಳಿಯ ಮಧ್ಯಭಾಗದಲ್ಲಿರುವ ದೇವಸ್ಥಾನದ ಭದ್ರವಾದ ನಾಲ್ಕು ಕಬ್ಬಿಣದ ಬಾಗಿಲುಗಳನ್ನು ಸಲಾಕೆಯಿಂದ ಮೀಟಿ ಒಳನುಗ್ಗಿರುವ ಕಳ್ಳರು ಸುಮಾರು 16 ಕೆ.ಜಿ ಗೂ ಹೆಚ್ಚು ಬೆಳ್ಳಿ, ಅರ್ಧ ಕೆ.ಜಿ ಚಿನ್ನ, ಹುಂಡಿಯಲ್ಲಿದ್ದ ಲಕ್ಷಾಂತರ ರು. ನಗದು ದೋಚಿ ಚಿಲ್ಲರೆ ಹಣ ಬಿಸಾಡಿ ಹೋಗಿದ್ದಾರೆ.
ಗರ್ಭಗುಡಿಯಲ್ಲಿರುವ ದೇವರ ಪ್ರಭಾವಳಿ, ಬಂಗಾರದ ಕಿವಿ, ಮೂಗು, ನಾಮ, ಕಂಠಾಭರಣ, ವಜ್ರದ ಕಣ್ಣುಬ್ಬು, ಗಂಟೆ, ಬೆಳ್ಳಿ ಕವಚ, ತಟ್ಟೆ, ವಜ್ರಾಂಗಿ ಸೇರಿದಂತೆ ಸುಮಾರು 60 ವರ್ಷ ಹಳೆಯ ಚಿನ್ನಾಭರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಭಾನುವಾರ ಬೆಳಿಗ್ಗೆ ದೇವರ ಪೂಜೆಗೆ ಅಣಿಯಾಗಿ ಬಂದ ಶಾಮಣ್ಣ ಭಟ್ಟರು ದೇವಸ್ಥಾನದ ಬಾಗಿಲು ತೆರೆದಿರುವುದು ನೋಡಿ, ಪೊಲೀಸರಿಗೆ ಸುದ್ದಿ ತಿಳಿದರು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಸ್ನಳ್ಳಿ, ಡಿವೈ.ಎಸ್ಪಿ. ಸಿದ್ದಪ್ಪ, ಸಿಪಿಐ ಸುಬ್ರಮಣ್ಯಂ ಸ್ಥಳ ಪರಿಶೀಲನೆ ನಡೆಸಿದರು. ಬೆಂಗಳೂರಿನಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ಶೋಧ ನಡೆಸಲಾಯಿತು. ದೇವಸ್ಥಾನದ ಅರ್ಚಕ ದಯಾನಿಧಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.